ಬೆಂಗಳೂರು: ರಾಜ್ಯದ ಒಟ್ಟಾರೆ ಸೋಂಕಿನ ಪೈಕಿ ಅತಿಹೆಚ್ಚು ರಾಜ್ಯದ ರಾಜಧಾನಿಯಲ್ಲೇ ಇದ್ದು, ಸೋಂಕಿತರು ಸರಿಯಾದ ಸಮಯಕ್ಕೆ ಹಾಸಿಗೆ, ಐಸಿಯು, ಆಕ್ಸಿಜನ್ ಸಿಗದೆ ಒದ್ದಾಡುತ್ತಿದ್ದರೆ ಒಂದಷ್ಟು ಮಂದಿ ಇಂಥ ಸಂದರ್ಭದಲ್ಲೂ ಬೆಡ್ ಬ್ಲಾಕಿಂಗ್ ಮಾಡಿಸಿ ಹಣ ಮಾಡಿಕೊಳ್ಳುತ್ತಿದ್ದಾರೆ. ಅಂಥ ಪ್ರಕರಣವನ್ನು ಸಂಸದ-ಶಾಸಕರು ಜತೆಯಾಗಿ ಬಯಲಿಗೆಳೆದ ಬೆನ್ನಿಗೇ ಇಬ್ಬರು ಆರೋಪಿಗಳ ಬಂಧನವಾಗಿದೆ.
ಬೆಡ್ ಬ್ಲಾಕಿಂಗ್ ದಂಧೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ರೋಹಿತ್ ಮತ್ತು ನೇತ್ರಾ ಎಂಬಿಬ್ಬರು ಏಜೆಂಟ್ಗಳನ್ನು ಬಂಧಿಸಿದ್ದಾರೆ. ಬೆಡ್ ಬ್ಲಾಕಿಂಗ್ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಈ ದಂಧೆಯ ಹಿಂದೆ ಇವರಿಬ್ಬರಲ್ಲದೆ ಇನ್ನೂ ಕೆಲವರು ಇರುವ ಶಂಕೆ ಇದ್ದು, ಪೊಲೀಸರು ಮತ್ತಷ್ಟು ತನಿಖೆಗೆ ಮುಂದಾಗಿದ್ದಾರೆ. ಬೆಡ್ ಬ್ಲಾಕಿಂಗ್ ದಂಧೆಯನ್ನು ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ, ಉದಯ್ ಗರುಡಾಚಾರ್ ಅವರು ಪೊಲೀಸರೊಂದಿಗೆ ಸ್ಥಳಕ್ಕೇ ತೆರಳಿ ಬಯಲಿಗೆಳೆದಿದ್ದಾರೆ.