ರಾಯಚೂರು: ಲಾಕ್ಡೌನ್ ದಿನಗಳಲ್ಲಿ ಅಗತ್ಯ ದಿನಸಿ ಸಿಗುತ್ತವೆಯೋ ಇಲ್ಲವೋ ಅಥವಾ ದುಬಾರಿ ಆಗಬಹುದು ಎನ್ನುವ ಆತಂಕದೊಂದಿಗೆ ಜನರು ಮುಗಿಬಿದ್ದು ಸೋಮವಾರ ದಿನಸಿ ಖರೀದಿಸುತ್ತಿರುವುದು ಕಂಡುಬಂತು.
ಎಪಿಎಂಸಿ ಆವರಣ, ಚಂದ್ರಮೌಳೇಶ್ವರ ವೃತ್ತ ಹಾಗೂ ಸರ್ದಾರ್ ವಲ್ಲಭಾಯ್ ಪಟೇಲ್ ವೃತ್ತ ಮಾರ್ಗದಲ್ಲಿರುವ ಮಳಿಗೆಗಳಲ್ಲಿ ಖರೀದಿ ಭಾರಾಟೆ ಜೋರಾಗಿತ್ತು. ಚೀಲಗಳನ್ನು ಹಿಡಿದು ಸರದಿ ನಿಂತಿದ್ದರು. ಸಾಮಾನ್ಯ ದಿಗಳಲ್ಲಿ ಒಂದು ಚೀಲದಲ್ಲಿ ಸರಕು ಖರೀದಿಸುತ್ತಿದ್ದವರು ಈಗ ಬೈಕ್, ಆಟೋ ಹಾಗೂ ಕಾರುಗಳಲ್ಲಿ ದಿನಸಿಗಳನ್ನು ತುಂಬಿಸಿಕೊಂಡು ಒಯ್ಯುತ್ತಿದ್ದಾರೆ. ಸಕ್ಕರೆ, ಚಹಾಪುಡಿ, ಬೇಳೆಕಾಳು, ಸಾಬೂನು, ಎಣ್ಣೆ ಸೇರಿದಂತೆ ದಿನಗಳನ್ನು ಎರಡು ತಿಂಗಳಿಗಾಗುವಷ್ಟು ಜನರು ಖರೀದಿಸಿದರು.
ಗ್ರಾಮೀಣ ಭಾಗದ ಕಿರಾಣಿದಾರರು ದಿನಸಿ ಪೊಟ್ಟಣಗಳನ್ನು ಸರಕು ವಾಹನಗಳಲ್ಲಿ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ. ಎಪಿಎಂಸಿ ಕಿರಾಣಾ ಸಗಟು ಮಳಿಗೆಗಳ ಎದುರು ಸಣ್ಣ ಪ್ರಮಾಣದ ಸರಕು ವಾಹನಗಳು ಮುಗಿಬಿದ್ದಿದ್ದವು. ಮಂಗಳವಾರ ಮಧ್ಯಾಹ್ನ 2 ಗಂಟೆವರೆಗೂ ಮಾತ್ರ ಖರೀದಿಗೆ ಅವಕಾಶ ಇದ್ದುದರಿಂದ ಪಟ್ಟಿಮಾಡಿದ್ದ ಸಾಮಗ್ರಿಗಳನ್ನು ಲಘುಬಗೆಯಿಂದ ಖರೀದಿಸಿ ವಾಹನಗಳಿಗೆ ತುಂಬಿಸಿಕೊಳ್ಳುವ ಧಾವಂತ ಕಂಡುಬಂತು.
ಎಪಿಎಂಸಿ ಗಂಜ್ ದಿನಸಿ ಸಗಟು ವ್ಯಾಪಾರಿ ಶ್ರೀನಿವಾಸ ದೇವನಪಲ್ಲಿ ಅವರು ಹೇಳುವ ಪ್ರಕಾರ, ‘ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಬೇರೆ ರಾಜ್ಯಗಳಿಂದ ದಿನಸಿಗಳ ಸಾಗಣೆಯಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಗುಟ್ಕಾ ಮಾತ್ರ ಬೇಡಿಕೆಗೆ ತಕ್ಕಂತೆ ಬಂದಿಲ್ಲ. ಅಡುಗೆ ಮನೆಗೆ ಬಳಸುವ ದಿನಸಿಗಳ ದರ ಕೂಡಾ ಎಂದಿನಂತೆಯೆ ಇದೆ’ ಎಂದರು.
ವಿಶಾಲ್ ಮಾರ್ಟ್, ರಿಲಯನ್ಸ್ ಮಾರ್ಟ್ ಸೇರಿದಂತೆ ದಿನಸಿ ಮಾರಾಟ ಮಾಡುವ ಸೂಪರ್ ಮಾರ್ಕೆಟ್ಗಳಲ್ಲೂ ಜನಜಂಗುಳಿ ನೆರೆದಿತ್ತು. ಥರ್ಮಲ್ ತಪಾಸಣೆ, ಮಾಸ್ಕ್ ಧಾರಣೆ ಹಾಗೂ ಸ್ಯಾನಿಟೈಜರ್ ಬಳಕೆ ಕಡ್ಡಾಯ ಮಾಡಲಾಗಿತ್ತು. ದಂಪತಿ ಸಮೇತ ಖರೀದಿಗೆ ಬಂದಿದ್ದರು.