ಮುಂಬೈ: ಕೊರೊನಾ ಹರಡುವಿಕೆ ನಿಯಂತ್ರಣಕ್ಕಾಗಿ ಮಹಾರಾಷ್ಟ್ರ ಸರ್ಕಾರ 15 ದಿನ ಜನತಾ ಕರ್ಫ್ಯೂ ವಿಧಿಸಿದೆ. ಈ ಕಠಿಣ ನಿಯಮಗಳಿಂದ ಶ್ರೀಸಾಮಾನ್ಯರು, ಬಡವರಿಗೆ ತೊಂದರೆ ಆಗದಿರುಲು ಮಹಾ ನೆರವು ಸಹ ಘೋಷಿಸಿದೆ.
ಜೀವ ಮತ್ತು ಜೀವನ.. ಮಂತ್ರ ಪಠಿಸಿದ ‘ಮಹಾ’ ಅಘಾಡಿ ಸರ್ಕಾರ ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸದವರ ಖಾತೆಗೆ ನಗದು ಪರಿಹಾರ ನೀಡಲು ಮುಂದಾಗಿದೆ. ಬಡ ಕುಟುಂಬಗಳಿಗೆ ಹೆಚ್ಚುವರಿ ಪಡಿತರದ ಜೊತೆ ‘ಶಿವ’ ಭೋಜನ್ ಆರಂಭಿಸಲು ಮುಂದಾಗಿದೆ. ಇದರ ಜೊತೆಗೆ ಆಟೋ ಚಾಲಕರು, ಕೂಲಿ ಕಾರ್ಮಿಕರ ನರೆವಿಗೂ ಸರ್ಕಾರ ಧಾವಿಸಿದೆ.
ಮಹಾ ನೆರವು: ಕೂಲಿ ಕಾರ್ಮಿಕರು, ಮನೆ ಕೆಲಸದವರ ಖಾತೆಗೆ 1,500 ರೂ. ಜಮೆ ಆಗಲಿದೆ. ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳ ಖಾತೆಗೆ 1500 ರೂ. ಸಿಗಲಿದೆ. ಪ್ರತಿ ಬಡ ಕುಟುಂಬಕ್ಕೂ 3 ಕೆಜಿ ಗೋಧಿ, 2 ಕೆಜಿ ಅಕ್ಕಿ ಸಿಗಲಿದ್ದು, ಶಿವ ಭೋಜನ್ ಅಡಿಯಲ್ಲಿ ಎಲ್ಲರಿಗೂ ಉಚಿತ ತಿಂಡಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಜಿಎಸ್ಟಿ ಪಾವತಿಗೆ 3 ತಿಂಗಳು ಕಾಲವಕಾಶ ನೀಡಲಾಗಿದೆ.
ನಿಯಮಗಳನ್ನ ಪಾಲಿಸಿ ಸಿಎಂ ಮನವಿ: ಇಂದು ರಾತ್ರಿ 8 ಗಂಟೆಯಿಂದ ಏಪ್ರಿಲ್ 30ರವರೆಗೆ ಜನತಾ ಕಫ್ರ್ಯೂ ಇರಲಿದೆ. ರಾಜ್ಯಾದ್ಯಂತ 144 ಸೆಕ್ಷನ್ ಜಾರಿಯಾಗಲಿದೆ. ಇದು ಲಾಕ್ಡೌನ್ ಅಲ್ಲ. ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಮನೆಯಿಂದ ಹೊರಗಡೆ ಬರಬೇಕು. ಭಾರೀ ಸಂಖ್ಯೆಯಲ್ಲಿ ಜನರು ಸೇರುವುದಕ್ಕೆ ನಿರ್ಬಂಧ ಹೇರಲಾಗಿದ್ದು, 4ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಜನರು ಈ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಸಿಎಂ ಉದ್ಧವ್ ಠಾಕ್ರೆ ಮನವಿ ಮಾಡಿದ್ದಾರೆ
ತುರ್ತು ಸಂದರ್ಭ ಹೊರತು ಪಡಿಸಿ ಅನಗತ್ಯ ಪ್ರಯಾಣವನ್ನು ಕೈಗೊಳ್ಳುವಂತಿಲ್ಲ. ಅಗತ್ಯ ವಸ್ತುಗಳ ಅಂಗಡಿ, ಮೆಡಿಕಲ್, ಬ್ಯಾಂಕು, ಮಾಧ್ಯಮ ಸೇವೆಗಳಿಗೆ ಅನುಮತಿ ನೀಡಲಾಗಿದೆ. ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಅಗತ್ಯ ಸೇವೆಗಳು ಲಭ್ಯವಿರುತ್ತದೆ. ರಾತ್ರಿ 8ರ ಬಳಿಕ ಅಂಗಡಿಗಳನ್ನು ಮುಚ್ಚಬೇಕು ಎಂದು ತಿಳಿಸಿದ್ದಾರೆ.
ಸ್ಥಳೀಯ ರೈಲುಗಳು ಮತ್ತು ಬಸ್ ಸೇವೆಗಳು ಅಗತ್ಯ ಸೇವೆಗಳಿಗೆ ಮಾತ್ರ ಲಭ್ಯವಿರುತ್ತದೆ. ನಿರ್ಮಾಣ ಕಾಮಗಾರಿ ಕೆಲಸಗಳಿಗೆ ಅನುಮತಿ ನೀಡಲಾಗುತ್ತದೆ. ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ತೆರೆಯುವಂತಿಲ್ಲ. ಹೋಮ್ ಡೆಲಿವರಿಗೆ ಅನುಮತಿ ನೀಡಲಾಗಿದೆ.