ನನ್ನ ಮೇಲೆ ನಂಬಿಕೆ ಇರಿಸಿ ಎಐಸಿಸಿ ವರಿಷ್ಠರು ಲೋಕಸಭೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿದ್ದಾರೆ. ಸೋಮವಾರ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ ಸೇರಿದಂತೆ ನಮ್ಮ ರಾಜ್ಯದ ನಾಯಕರು ಈ ವೇಳೆ ಹಾಜರಿರಲಿದ್ದಾರೆ. ಸಿಡಿ ಕೇಸಗೂ ನಮಗೂ ಸಂಬಂಧವಿಲ್ಲ, ನಮ್ಮ ಗೆಲುವಿಗೆ ಯಾವ ಅಡೆತಡೆಗಳೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ, ಮಾಜಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾಜಿ ಸಚಿವ ಸತೀಶ ಜಾರಕಿಹೊಳಿ ಶುಕ್ರವಾರ ಮಾತನಾಡಿ, ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕದ್ದು ಖುಷಿಯಾಗಿದೆ. 20 ವರ್ಷಗಳ ಹಿಂದೆ ಕಳೆದುಕೊಂಡಿದ್ದ ಸೀಟನ್ನು ಮತ್ತೆ ಪಡೆದುಕೊಳ್ಳಲು ಅವಕಾಶ ಒದಗಿದೆ. ಜನರ ಆಶೀರ್ವಾದ ಸಿಗಬೇಕು. ನಾನು ಸೋಮವಾರ ನಾಮಪತ್ರ ಸಲ್ಲಿಸಲಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ ಸೇರಿದಂತೆ ಮುಂಬೈ ಕರ್ನಾಟಕದ ನಾಯಕರೆಲ್ಲ ಪಾಲ್ಗೊಳ್ಳಲಿದ್ದಾರೆ ಎಂದರು.
ಕೆಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಒಂದು ತಿಂಗಳ ಹಿಂದೆಯೇ ಮಾನಸಿಕವಾಗಿ ತಯಾರಾಗಿದ್ದೆ. ಜಿಲ್ಲೆಯಲ್ಲಿ 6 ಬಿಜೆಪಿ ಶಾಸಕರಿದ್ದರೂ ಕಾಂಗ್ರೆಸ್ ಗೆಲುವಿಗೆ ತೊಂದರೆಯಿಲ್ಲ. ನಮ್ಮ ಪಕ್ಷದ ವಿಚಾರಗಳು, ಮೋದಿ ಸರಕಾರದ ವೈಫಲ್ಯಗಳು, ಬೆಲೆ ಏರಿಕೆ, ರೈತ ವಿರೋಧಿ ಕಾನೂನು ಇವೆಲ್ಲ ಚುನಾವಣೆಯಲ್ಲಿ ನಮ್ಮ ಅಜೆಂಡಾಗಳು ಎಂದರು.
ರಾಷ್ಟ್ರೀಯ ನಾಯಕರಾರೂ ನಾಮಪತ್ರ ಸಲ್ಲಿಸುವ ವೇಳೆ ಇರುವುದಿಲ್ಲ. ರಾಜ್ಯದ ನಾಯಕರು ಇರುತ್ತಾರೆ. ಸೋಮವಾರ ಇಡೀ ದಿನ ಹೋಳಿ ಹುಣ್ಣಿಮೆ ಇರುವುದರಿಂದ ಅದನ್ನು ಹೋಲಿ ಡೇ (ಪವಿತ್ರ ದಿನ) ಎಂದು ಕರೆಯುವುದರಿಂದ ರಾಹುಕಾಲ ನೋಡಿ ನಾಮಪತ್ರ ಸಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ನಗುತ್ತ ಉತ್ತರಿಸಿದ ಸತೀಶ ಜಾರಕಿಹೊಳಿ, ಪಕ್ಷ, ಸಂಘಟನೆ ಮತ್ತು ಚುನಾವಣೆ ಹಿತದೃಷ್ಟಿಯಿಂದ ಸ್ಪರ್ಧೆ ಅನಿವಾರ್ಯವಾಗಿತ್ತು. ಒಪ್ಪಿಕೊಂಡು ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ತಿಳಿಸಿದರು.
ಜಾತಿ ಆಧರಿಸಿ ಚುನಾವಣೆ ಮಾಡುವುದಿಲ್ಲ. ನಮ್ಮ ಕಡೆಗೂ ಲಿಂಗಾಯತರಿದ್ದಾರೆ, ಮರಾಠರೂ ಇದ್ದಾರೆ. ನೂರಕ್ಕೆ ನೂರು ಯಾರೂ ವಿರೋಧಿಗಳಿಲ್ಲ. ಸಾರ್ವತ್ರಿಕ ಚುನಾವಣೆಯಲ್ಲಿ ಅಲೆ ಬೇರೆಯದೇ ಇತ್ತು. ಈಗ ಉಪಚುನಾವಣೆ ಆಗಿರುವುದರಿಂದ ವಿಭಿನ್ನ ಅಲೆ ಇದೆ. ಅನುಕಂಪ ಅವರ ಪಕ್ಷಕ್ಕೆ ಸಂಬಂಧಿಸಿದ ವಿಚಾರ. ನಮ್ಮದೇನಿದ್ದರೂ ಜನಸಾಮಾನ್ಯರ ಸಮಸ್ಯೆಗಳು, ಸರಕಾರದ ವೈಫಲ್ಯಗಳ ವಿಚಾರ. ಇದರ ಆಧಾರದಲ್ಲೇ ನಾವು ಚುನಾವಣೆ ಎದುರಿಸುತ್ತೇವೆ ಎಂದು ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.
ಒಟ್ಟಿನಲ್ಲಿ ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಜೆಂಡಾ ಬೇರೆಯದೇ ಆಗಿದೆ. ಅನುಕಂಪ ನಮಗೆ ಸಂಬಂಧಿಸಿದ್ದಲ್ಲ. ನಮ್ಮದು ಜನಸಾಮಾನ್ಯರ ಸಮಸ್ಯೆಗಳಿಗೆ ಸಂಬಂಧಿಸಿದ ಹೋರಾಟದ ಪಕ್ಷ, ನಮ್ಮ ನಾಯಕರು ನಾಮಪತ್ರ ಸಲ್ಲಿಸುವ ವೇಳೆ, ಪ್ರಚಾರದ ವೇಳೆ ಜೊತೆಗೆ ಇರುತ್ತಾರೆ ಎಂದು ಶಾಸಕ ಸತೀಶ ಜಾರಕಿಹೊಳಿ ತಿಳಿಸಿದರು.