ಬೆಂಗಳೂರು: ಇಷ್ಟು ದಿನ ಬೆಂಗಳೂರಷ್ಟೇ ಕೊರೋನಾ ಹಾಟ್ ಸ್ಪಾಟ್ ಆಗಿತ್ತು. ಆದರೆ ಈಗ ಜಿಲ್ಲೆಗಳು ಹಾಟ್ಸ್ಪಾಟ್ ಆಗಿ ಮಾರ್ಪಡುತ್ತಿವೆ.
ಬೆಂಗಳೂರು ಹೊರತುಪಡಿಸಿ ರಾಜ್ಯದ 12 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಸಾವಿರ ದಾಟಿದೆ. ಇದರಲ್ಲಿ ಐದು ಜಿಲ್ಲೆಗಳು ಎರಡು ಸಾವಿರದ ಗಡಿ ದಾಟಿವೆ. ದಕ್ಷಿಣ ಕನ್ನಡ ಬೆಂಗಳೂರಿಗೆ ಸ್ಪರ್ಧೆ ನೀಡುವ ರೀತಿಯಲ್ಲಿ ಹವಣಿಸುತ್ತಿರುವಂತಿದ್ದು, ನಾಲ್ಕು ಸಾವಿರದ ಸನಿಹದಲ್ಲಿದೆ.
ಜಿಲ್ಲೆಗಳಲ್ಲಿ ಯಾಕೆ ಸೋಂಕು ಹೆಚ್ಚಾಗುತ್ತಿದೆ ಎಂದು ಕೇಳಿದರೆ ಬೆಂಗಳೂರಿನತ್ತ ಸಚಿವ ಮಾಧುಸ್ವಾಮಿ ಬೆಟ್ಟು ಮಾಡುತ್ತಾರೆ. ಬೆಂಗಳೂರಿನಿಂದ ಬಂದವರನ್ನು ಹಳ್ಳಿಗಳಿಗೆ ಸೇರಿಸಿಕೊಳ್ಳದಿದ್ದರೆ ಸೋಂಕು ಹೆಚ್ಚಾಗುತ್ತಿರಲಿಲ್ಲ. ಅವರನ್ನು ಯಾವುದೇ ಪರೀಕ್ಷೆ ನಡೆಸದೇ ನೇರವಾಗಿ ಸೇರಿಸಿಕೊಳ್ಳಬಾರದಿತ್ತು. ಪರೀಕ್ಷೆ ನಡೆಸಿ ನೆಗೆಟಿವ್ ಬಂದರೆ ಊರೊಳಗೆ ಸೇರಿಸಿಕೊಳ್ಳಬೇಕಿತ್ತು ಎಂದಿದ್ದಾರೆ.
ತುಮಕೂರಲ್ಲಿ ಮಾತನಾಡಿದ ಅವರು, ನಮಗೆ ತುಂಬಾ ತಾಪತ್ರಯ ತಂದಿಟ್ಟಿರೋದು ಬೆಂಗಳೂರಿನಿಂದ ಬಂದವರು. ಅವರನ್ನು ಹಳ್ಳಿಗಳಿಗೆ ಬಿಟ್ಟುಕೊಳ್ಳದಿದ್ದರೆ, ಹಳ್ಳಿಗಳಲ್ಲಿ ಇಂದು ಕೊರೊನಾ ಕೇಸ್ ಇರುತ್ತಿರಲಿಲ್ಲ ಎಂದಿದ್ದಾರೆ. ಇನ್ಮುಂದೆ ಬೆಂಗಳೂರಿನಿಂದ ಬಂದು ಮಾಹಿತಿ ನೀಡದಿದ್ರೆ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಪರೀಕ್ಷೆ ಮಾಡಿಸಿಕೊಳ್ಳದೇ ಬಂದರೆ ಅಂತವರ ಜೊತೆ ಸಂಪರ್ಕ ಇಟ್ಕೊಳ್ಳಬೇಡಿ ಅಂತಾ ಮಾಧುಸ್ವಾಮಿ ಕರೆ ನೀಡಿದರು.
ಈ ಮಧ್ಯೆ, ಲಾಕ್ಡೌನ್ ತೆರವು ಬೆನ್ನಲ್ಲೇ ಸರ್ಕಾರಕ್ಕೆ ಶ್ರಾವಣ ಮಾಸದ ಹಬ್ಬಗಳ ರೂಪದಲ್ಲಿ ಹೊಸ ಸವಾಲು ಎದುರಾಗಿದೆ. ಹಬ್ಬಗಳ ಸೀಸನ್ನಿಂದ ಬೆಂಗಳೂರಿಗೆ ಟೆನ್ಶನ್ ಶುರುವಾಗ್ತಿದೆ.
ಮತ್ತೆ ಜನರ ವಲಸೆ ಹೆಚ್ಚಾಗಿ, ವೈರಸ್ ಗ್ರಾಮೀಣ ಭಾಗಕ್ಕೆ ಹಬ್ಬುವ ಸಾಧ್ಯತೆ ಇದೆ. ಇನ್ನು ಲಾಕ್ಡೌನ್ ಅಂತ್ಯವಾದ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆಯಿಂದ ಬೆಂಗಳೂರಿಗೆ ಮರುವಲಸೆ ಆರಂಭ ಆಗಲಿದೆ.