ಬೆಂಗಳೂರು,ಮಾ.8- ರಾಜ್ಯದಲ್ಲಿ ಕೊರೊನಾ ನಿರ್ವಹಣೆಗೆ ಇದುವರೆಗೂ 5372 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದರಿಂದ 63.59 ಲಕ್ಷ ಫಲಾನುಭವಿಗಳಿಗೆ ನೆರವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಯವ್ಯಯದಲ್ಲಿ ಅಂಕಿ ಅಂಶ ನೀಡಿದ್ದಾರೆ.ಇದುವರೆಗೂ 1.91ಕೋಟಿ ಮಂದಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. 9.53 ಲಕ್ಷ ಸೋಂಕಿತರಿಗೆ ಉಚಿತ ಚಿಕಿತ್ಸೆ ಒದಗಿಸಲಾಗಿದೆ. ಕಟ್ಟಡ ಕಾರ್ಮಿಕರಿಗೆ 90 ಲಕ್ಷ ಆಹಾರ ಪೊಟ್ಟಣ ವಿತರಿಸಲಾಗಿದೆ. 11,770 ಕುಶಲಕರ್ಮಿಗಳಿಗೆ ಹಾಗೂ 51 ಲಕ್ಷ ರೈತರಿಗೆ ನೆರವು ನೀಡಲಾಗಿದೆ.
ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಆದರೂ, ಎರಡನೆ ಹಂತದ ಕೊರೊನಾ ಭೀತಿ ಇರುವ ಹಿನ್ನಲೆಯಲ್ಲಿ ಜನರು ಅಗತ್ಯ ನಿಯಮಗಳನ್ನು ಪಾಲಿಸುವುದನ್ನು ಮುಂದುವರೆಸಬೇಕು ಎಂದು ಸಿಎಂ ಮನವಿ ಮಾಡಿಕೊಂಡಿದ್ದಾರೆ.
ಕೊರೊನಾದಿಂದ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡರೂ ರಾಜ್ಯದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ನೂತನ ದಾಖಲೆ ಮಾಡಲಾಗಿದೆ. ಆಹಾರ ಧಾನ್ಯಗಳ ಉತ್ಪಾದನೆ 140 ಲಕ್ಷ ಟನ್ಗೆ ಹೆಚ್ಚಿದೆ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ಸಂಕಷ್ಟದಲ್ಲೂ ಬದ್ದವೆಚ್ಚಗಳನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಯಡಿಯೂರಪ್ಪ ವಿವರಣೆ ನೀಡಿದ್ದಾರೆ.