ಚೆನ್ನೈ, ಮಾ.6 (ಪಿಟಿಐ)- ಏ.6 ರಂದು ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆ ಒಪ್ಪಂದಕ್ಕೆ ಆಡಳಿತರೂಢ ಎಐಎಡಿಎಂಕೆ ಮತ್ತು ಬಿಜೆಪಿ ಸಹಿ ಹಾಕಿವೆ. ನಿನ್ನೆವರೆಗೆ ನಡೆದ ಮಾತುಕತೆಯಲ್ಲಿ ಎಐಎಡಿಎಂಕೆ 20 ವಿಧಾನಸಭಾ ಕ್ಷೇತ್ರಗಳನ್ನು ಹಾಗೂ ಕನ್ಯಾಕುಮಾರಿ ಲೋಕಸಭಾ ಸ್ಥಾನವನ್ನು ಮಿತ್ರ ಪಕ್ಷ ಭಾರತೀಯ ಜನತಾ ಪಕ್ಷಕ್ಕೆ ಬಿಟ್ಟುಕೊಟ್ಟಿದೆ.
ಎರಡೂ ಪಕ್ಷಗಳ ನಡುವೆ ನಡೆದ ಹಲವು ಸುತ್ತುಗಳ ಮಾತುಕತೆ ಪ್ರಕ್ರಿಯೆ ಮುಗಿದು ಅಂತಿಮವಾಗಿ ಈ ಒಡಂಬಡಿಕೆಗೆ ಬರಲಾಗಿದೆ. ಆರು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಎಐಎಡಿಎಂಕೆ ತಡರಾತ್ರಿ ಕೇಸರಿ ಪಕ್ಷದೊಂದಿಗೆ ಚುನಾವಣಾ ಒಪ್ಪಂದವನ್ನು ದೃಢಪಡಿಸಿತು.
ಎಐಎಡಿಎಂಕೆ ಪಕ್ಷ ಒಪ್ಪಂದ ಪತ್ರವನ್ನು ಬಿಡುಗಡೆ ಮಾಡಿ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ವಾಗ್ದಾನ ಮಾಡಿದೆ. ಒಡಂಬಡಿಕೆಗೆ ಆಡಳಿತ ಪಕ್ಷದ ಕಡೆಯಿಂದ ಓ. ಪನ್ನೀರ್ಸೆಲ್ವಂ ಮತ್ತು ಕೆ. ಪಳನಿಸ್ವಾಮಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ರಾಜ್ಯ ಬಿಜೆಪಿ ಘಟಕದ ಮುಖ್ಯಸ್ಥ ಎಲ್. ಮುರುಗನ್ ಸಹಿ ಹಾಕಿದರು.
ಎಐಎಡಿಎಂಕೆ ಇತ್ತೀಚೆಗೆ ಪಾಟ್ಟಾಲಿ ಮಕ್ಕಳ್ ಕಟ್ಚಿಯೊಡನೆಯೂ ಸೀಟು ಹಂಚಿಕೆ ಮಾಡಿಕೊಂಡು 23 ಕ್ಷೇತ್ರಗಳನ್ನು ಆ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಲ್ಲಿ ಎಐಎಡಿಎಂಕೆ 170 ಕ್ಷೇತ್ರಗಳಲ್ಲಿ ಸ್ರ್ಪಸುವ ಇಚ್ಛೆ ವ್ಯಕ್ತಪಡಿಸಿದೆ. 2016ರ ಚುನಾವಣೆಯಲ್ಲಿ 134 ಸೀಟುಗಳನ್ನು ಗೆದ್ದಿತ್ತು ಎಂದು ತಿಳಿದುಬಂದಿದೆ.
# ಮಾತುಕತೆ:
ಕ್ಷೇತ್ರಗಳ ಹಂಚಿಕೆ ಸಂಬಂಧವಾಗಿ ನಡೆದ ಸಭೆಯಲ್ಲಿ ಬಿಜೆಪಿಯ ಉನ್ನತ ನಾಯಕ ಅಮಿತ್ ಶಾ, ಎಐಎಡಿಎಂಕೆ ಪಳನಿಸ್ವಾಮಿ ಮತ್ತು ಪನ್ನೀರ್ಸೆಲ್ವಂ ಅವರ ನಡುವಿನ ಸಭೆಯಲ್ಲಿ ಆರಂಭವಾದ ಸೀಟು ಹಂಚಿಕೆ ಕುರಿತು ಮಾತುಕತೆಯನ್ನು ರವಿ ಅವರು ಮುಂದೆ ತೆಗೆದುಕೊಂಡು ಹೋಗಿದ್ದಾರೆ.