ನವದೆಹಲಿ: ವಾಟ್ಸ್ ಆಪ್ ಹೊಸ ಗೌಪ್ಯತಾ ನೀತಿಯನ್ನು ಜಾರಿಗೆ ತರಲು ಮುಂದಾಗಿರುವ ಮೆಸೇಜಿಂಗ್ ಆಪ್ ವಾಟ್ಸಪ್ ಮತ್ತು ಅದರ ಮಾತೃ ಸಂಸ್ಥೆ ಫೇಸ್ ಬುಕ್ ಮೇಲೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿ ವರ್ತಕರ ಸಂಘಟನೆ ಸಿಎಐಟಿ ಯು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಅವರಿಗೆ ಭಾನುವಾರ ಪತ್ರ ಬರೆದಿದೆ. ‘ಹೊಸ ಗೌಪ್ಯತಾ ನೀತಿಯ ಮೂಲಕ ವಾಟ್ಸ್ ಆಪ್ ಬಳಸುತ್ತಿರುವ ವ್ಯಕ್ತಿಯ ಎಲ್ಲ ರೀತಿಯ ವೈಯಕ್ತಿಕ ಮಾಹಿತಿ, ಪಾವತಿ ವಹಿವಾಟು, ಸಂಪರ್ಕ, ಸ್ಥಳ ಮತ್ತು ಇತರ ಪ್ರಮುಖ ಮಾಹಿತಿಗಳನ್ನು ವಾಟ್ಸ್ ಆಪ್ ಮೂಲಕ ಪಡೆದುಕೊಳ್ಳಬಹುದಾಗಿದೆ’ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಆತಂಕ ವ್ಯಕ್ತಪಡಿಸಿದೆ.
ಸಚಿವ ರವಿ ಶಂಕರ್ ಪ್ರಸಾದ್ ಅವರಿಗೆ ನೀಡಿದ ಮನವಿ ಪತ್ರದಲ್ಲಿ, ‘ಸರ್ಕಾರ ಕೂಡಲೇ ವಾಟ್ಸ್ ಆಪ್ ಅನ್ನು ಹೊಸ ನೀತಿ ಜಾರಿಗೆ ತರದಂತೆ ನಿರ್ಬಂಧ ಹೇರಬೇಕು ಅಥವಾ ವಾಟ್ಸ್ ಆಪ್ ಮತ್ತು ಅದರ ಮಾತೃ ಸಂಸ್ಥೆ ಫೇಸ್ ಬುಕ್ ಮೇಲೆ ನಿಷೇಧ ಹೇರಬೇಕು’ ಎಂದು ಸಿಎಐಟಿ ಒತ್ತಾಯಿಸಿದೆ. ಫೇಸ್ ಬುಕ್ ಭಾರತದಲ್ಲಿ 200 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಪ್ರತಿಯೊಬ್ಬ ಬಳಕೆದಾರರ ಡೇಟಾವನ್ನು ಪ್ರವೇಶಿಸಲು ಅವಕಾಶ ಕಲ್ಪಿಸಿದ್ದು, ಆರ್ಥಿಕತೆಗೆ ಮಾತ್ರವಲ್ಲ, ದೇಶದ ಭದ್ರತೆಗೆ ಕೂಡ ಗಂಭೀರ ಅಪಾಯವನ್ನು ತಂದೊಡ್ಡಬಹುದು ಎಂದು ಸಿಎಐಟಿ ಹೇಳಿದೆ.
ಆದರೆ, ವಾಟ್ಸ್ ಆಪ್ ವಕ್ತಾರರು ಪಿಟಿಐಗೆ ನೀಡಿದ ಇ-ಮೇಲ್ ನಲ್ಲಿ, ‘ಪಾರದರ್ಶಕತೆಯನ್ನು ಮತ್ತಷ್ಟು ಹೆಚ್ಚಿಸಲು, ನಮ್ಮ ಮಾತೃ ಸಂಸ್ಥೆ ಫೇಸ್ ಬುಕ್ ನಿಂದ ತಮ್ಮ ಗ್ರಾಹಕರೊಂದಿಗೆ ಸಂವಹನ ನಡೆಸಲು ಸಹಾಯ ಮಾಡಲು ನಾವು ಗೌಪ್ಯತೆ ನೀತಿಯನ್ನು ಪರಿಷ್ಕರಿಸಿದ್ದೇವೆ ಅಂಥ ತಿಳಿಸಿದೆ. ‘ಜನರ ಖಾಸಗಿತನ ವನ್ನು ರಕ್ಷಿಸಲು ವಾಟ್ಸ್ ಆಪ್ ಬದ್ಧವಾಗಿದೆ. ಈ ಬದಲಾವಣೆಗಳ ಬಗ್ಗೆ ನಾವು ಬಳಕೆದಾರರೊಂದಿಗೆ ನೇರವಾಗಿ ಸಂವಹನ ಮಾಡುತ್ತಿದ್ದೇವೆ, ಆದ್ದರಿಂದ ಮುಂದಿನ ತಿಂಗಳಅವಧಿಯಲ್ಲಿ ಹೊಸ ನೀತಿಯನ್ನು ಪರಿಶೀಲಿಸಲು ಅವರಿಗೆ ಸಮಯವಿದೆ’ ಎಂದು ವಕ್ತಾರರು ತಿಳಿಸಿದ್ದಾರೆ. ಈ ಅಪ್ ಡೇಟ್ ಫೇಸ್ ಬುಕ್ ನೊಂದಿಗೆ ವಾಟ್ಸಾಪ್ ನ ಡೇಟಾ ಹಂಚಿಕೆ ಯ ಅಭ್ಯಾಸಗಳನ್ನು ಬದಲಿಸುವುದಿಲ್ಲ ಮತ್ತು ಜನರು ಪ್ರಪಂಚದಲ್ಲಿ ಎಲ್ಲೇ ಇದ್ದರೂ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಹೇಗೆ ಖಾಸಗಿಯಾಗಿ ಸಂವಹನ ನಡೆಸುತ್ತದೆ ಎಂಬುದರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.