ಬೆಳಗಾವಿ ಮಹಾನಗರ ಪಾಲಿಕೆ ಆವರಣದಲ್ಲಿ ಪೊಲೀಸರು ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ನಡುವೆ ಹೈಡ್ರಾಮಾ ನಡೆದಿದೆ. ಪಾಲಿಕೆ ಎದುರು ಕನ್ನಡ ಧ್ವಜ ಹಾರಾಡಿಸುವ ನಿಟ್ಟಿನಲ್ಲಿ ಪೊಲೀಸರು ಹಾಗೂ ಕನ್ನಡಪರ ಹೋರಾಟಗಾರರ ನಡುವೆ ವಗವಾದ ನಡೆದಿದೆ.
ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ ಸಾರಥ್ಯದಲ್ಲಿ ಕನ್ನಡದ ಅಭಿಮಾನಿಗಳು ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಕನ್ನಡದ ಧ್ವಜ ಹಾರಿಸುವ ಮೂಲಕ ಕನ್ನಡಿಗರ ಬಹುದಿನಗಳ ಕನಸು ನನಸು ಮಾಡಿದ್ದಾರೆ.
ಶ್ರೀನಿವಾಸ ತಾಳೂರಕರ ನೇತ್ರತ್ವದಲ್ಲಿ ಕನ್ನಡ ಅಭಿಮಾನಿಗಳ ಗುಂಪು ಕನ್ನಡದ ಜಯಘೋಷಗಳೊಂದಿಗೆ ಬೆಳಗಾವಿ ಮಹಾನಗರ ಪಾಲಿಕೆಗೆ ಆಗಮಿಸಿ ಧ್ವಜ ಕಂಬದ ಸಮೇತ ಪಾಲಿಕೆ ಮುಖ್ಯದ್ವಾರದ ಬಳಿ ಕನ್ನಡ ಧ್ವಜವನ್ನು ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯ ಮೇಲೆ ಕನ್ನಡ ಧ್ವಜ ಹಾರಬೇಕೆನ್ನುವದು ಕನ್ನಡಿಗರ ಬಹುದಿನಗಳ ಕನಸಾಗಿತ್ತು ,ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ ಕನ್ನಡ ಧ್ವಜ ಹಾರಿಸಿ ಕನ್ನಡದ ಕಳಕಳಿ ತೋರಿಸಿದ್ದಾರೆ
ಪಾಲಿಕೆ ಎದುರು ಕನ್ನಡ ದ್ವಜ ಸ್ತಂಭ ಸ್ಥಾಪಿಸಲು ಅನುಮತಿ ಇಲ್ಲ ಎಂದು ಹೇಳಿದರೂ ಕನ್ನಡಪರ ಸಂಘಟನೆ ಕಾರ್ಯಕರ್ತರು ಧ್ವಜ ಸ್ತಂಭ ಸ್ಥಾಪಿಸಿ ಕನ್ನಡ ಬಾವುಟ ಹಾರಿಸಿದ್ದಾರೆ. ಈ ವೇಳೆ ಧ್ವಜ ಸ್ಥಂಭ ತೆರವುಗೊಳಿಸಲು ಪೊಲೀಸರು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರು ಹಾಗೂ ಪೊಲೀಸರ ನಡುವೆ ನೂಕಾಟ-ತಳ್ಳಾಟ ಆರಂಭವಾಗಿದೆ.
ಅಂತಿಮವಾಗಿ ಹೋರಾಟಗಾರರು ಪಟ್ಟುಬಿಡದೇ ಕನ್ನಡ ಧ್ವಜ ಸ್ತಂಭ ಸ್ಥಾಪಿಸಿಸಿದ್ದು, ಪಾಲಿಕೆ ಎದುರು ಸ್ಥಾಪಿಸಿರುವ ಧ್ವಜ ಸ್ತಂಭವನ್ನು ಯಾವುದೇ ಕಾರಣಕ್ಕೂ ತೆರವು ಮಾಡಬಾರದು, ಒಂದು ವೇಳೆ ಪೊಲೀಸರು ತೆರವಿಗೆ ಮುಂದಾದರೆ ಇಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.