ವಿಜಯಪುರ(ಡಿ. 24): ಕೊರೋನಾ ತಡೆಗಟ್ಟಲು ರಾಜ್ಯ ಸರಕಾರ ಇಂದಿನಿಂದ ರಾತ್ರಿ 11 ಗಂಟೆಯಿಂದ ಬೆ. 5ರ ವರೆಗೆ ರಾತ್ರಿ ಕರ್ಫ್ಯೂ ವಿಧಿಸಿರುವ ಕ್ರಮವನ್ನು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗಡೌ ರಾ. ಪಾಟೀಲ ಯತ್ನಾಳ ವ್ಯಂಗ್ಯವಾಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ರಾತ್ರಿ ಕರ್ಫ್ಯೂಗೆ ಅರ್ಥವೇ ಇಲ್ಲ. ರಾತ್ರಿ ಕರ್ಫ್ಯೂ ವಿಧಿಸಿರುವುದು ವ ಪೊಲೀಸರಿಗೆ ತೊಂದರೆ ವಿಧಿಸಿದಂತಾಗಿದೆ. ಸಾರ್ವಜನಿಕರೊಂದಿಗೆ ಪೊಲೀಸರು ಜಗಳವಾಡಲು ಇಂತಹ ನಿರ್ಣಯಗಳು ಕಾರಣವಾಗುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾತ್ರಿ ಕರ್ಫ್ಯೂನಂಥ ಅರ್ಧಂಬರ್ಧ ನಿರ್ಣಯ ಮಾಡಬಾದರು. ರಾತ್ರಿ ಕರ್ಫ್ಯೂವನ್ನು ತೆಗೆದು ಹಾಕಬೇಕು. ರಾತ್ರಿ ಕರ್ಫ್ಯೂಗೆ ಬೆಲೆಯೇ ಇಲ್ಲ. ರಾತ್ರಿ ಕರ್ಫ್ಯೂ ಜಾರಿಯಿಂದ ಏನು ಉಪಯೋಗವಿದೆ ಅರ್ಥವಾಗುತ್ತಿಲ್ಲ. ಕೊರೋನಾ ರಾತ್ರಿ ಹೆಚ್ಚಾಗುತ್ತೋ, ಹಗಲು ಹೆಚ್ಚಾಗುತ್ತೋ ನಮಗೂ ಗೊತ್ತಿಲ್ಲ. ವೈಜ್ಞಾನಿಕ ಮತ್ತು ವೈದ್ಯಕೀಯ ಸಲಹೆ ತೆಗೆದುಕೊಂಡು ನಿರ್ಧರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.ಒಂದು ಕಡೆ ಕ್ರಿಸ್ ಮಸ್ ಎಲ್ಲ ಕಾರ್ಯಕ್ರಮಗಳಿಗೆ ಅನುಮತಿ ನೀಡುತ್ತೇವೆ ಎಂದು ಹೇಳುವ ಸಿಎಂ ಗೊಂದಲದ ನಿರ್ಣಯ ಮಾಡಿದ್ದಾರೆ. ಸಿಎಂ ಕೂಡಲೇ ರಾತ್ರಿ ಕರ್ಫ್ಯೂ ವಿಚಾರವನ್ನು ಪುನರ್ ಪರಿಶೀಲನೆ ನಡೆಸಬೇಕು. ರಾತ್ರಿ 11 ರಿಂದ ಬೆ. 6ರ ಯಾರೂ ಹೊರಗೆ ತಿರುಗಾಡುವುದಿಲ್ಲ. ಎಲ್ಲರೂ ಮನೆಯಲ್ಲಿಯೇ ಇರುತ್ತಾರೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಇನ್ನೊಮ್ಮೆ ಪರಿಶೀಲಿಸಬೇಕು ಎಂದು ಅವರು ಹೇಳಿದರು.ರಾತ್ರಿ ಕರ್ಫ್ಯೂನಿಂದ ಪಾರ್ಟಿ ತಪ್ಪಿಸಬಹುದು ಎಂದು ಸಚಿವ ಸುಧಾಕರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹಾಗಿದ್ದರೆ ಕೇವಲ ಪಾರ್ಟಿಗಳನ್ನು ಮಾತ್ರ ನಿಷೇಧಿಸಲಿ. ಮೂರು ಗಜದ ಅಂತರವಿರಲಿ, ಮಾಸ್ಕ್ ಇರಲಿ ಎಂದು ಹೇಳಿದ್ದಾರೆ. ರಾತ್ರಿ ಎಲ್ಲರೂ ಮೂರು ಗಜ ಅಂತರದಲ್ಲಿಯೇ ಮಲಗುತ್ತಾರೆ. ಮಾಸ್ಕ್ ಹಾಕದೇ ಮಲಗುತ್ತಾರೆ. ಯಾರೂ ಹೊರಗಡೆಯೂ ಬರುವುದಿಲ್ಲ. ಮಾಧ್ಯಮಗಳೂ ಕೂಡ ಸಿಎಂ ನಿರ್ಧಾರವನ್ನು ವಿಮರ್ಶಿಸಿವೆ. ಸಿಎಂ ಕೈಗೊಂಡಿರುವ ಈ ನಿರ್ಣಯಕ್ಕೆ ಬೆಲೆಯೇ ಇಲ್ಲ ಎಂದು ಯತ್ನಾಳ ಆಕ್ರೋಶ ಹೊರ ಹಾಕಿದರು.
ಸರ್ಕಾರದ ರಾತ್ರಿ ಕರ್ಫ್ಯೂ ವಿಚಾರ ಪೊಲೀಸರು ಮತ್ತು ಸಾರ್ವಜನಿಕರ ಮಧ್ಯೆ ಜಗಳಕ್ಕೆ ಕಾರಣವಾಗುವುದರಲ್ಲಿ ಸಂಶಯವಿಲ್ಲ. ಇಂಥ ಕಿರಿಕಿರಿಗಳಿಗೆ ಅವಕಾಶ ನೀಡಬಾರದು. ಈ ರೀತಿ ಅರ್ಧಂಬರ್ಧ ನಿರ್ಣಯ ಮಾಡದೇ ರಾತ್ರಿ ಕರ್ಫ್ಯೂ ತೆಗೆದು ಹಾಕಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಒತ್ತಾಯಿಸಿದರು.