ಕಾರವಾರ; ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಬಿರಂಪಾಲಿಯಲ್ಲಿ ನಿವೃತ್ತ ಸೈನಿಕನ ಮೇಲೆ ನಡೆದ ಹಲ್ಲೆ ಪ್ರಕರಣ ಈಗ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಲ್ಲೆ ಪ್ರಕರಣದ ತನಿಖೆಯಲ್ಲಿ ಪೊಲೀಸರು ಪಕ್ಷಪಾತ ಮಾಡಿದ್ದಾರೆ ಎಂದು ಪೋಲಿಸ್ ಇಲಾಖೆ ವಿರುದ್ದ ರಾಜ್ಯ ಮಾಜಿ ಸೈನಿಕರ ಸಂಘ ಆರೋಪದ ಜತೆ ಅಸಮಾಧಾನ ವ್ಯಕ್ತ ಪಡಿಸಿದೆ.
ಕಳೆದ ನಾಲ್ಕು ದಿನದ ಹಿಂದೆ ಜಿಲ್ಲೆಯ ಜೋಯಿಡಾ ತಾಲೂಕಿನ ಬಿರಂಪಾಲಿಯಲ್ಲಿ ಹತ್ತು ಜನರ ಗುಂಪೊಂದು ಜಮೀನು ದಾರಿಯ ವಿವಾದಕ್ಕೆ ಸಂಬಂಧಿಸಿದಂತೆ ಇಲ್ಲಿನ ಮಾಜಿ ಸೈನಿಕ ಶಿವಾಜಿ ಎಂಬುವವರ ಮೇಲೆ ತೀವ್ರವಾಗಿ ಮಾರಣಾಂತಿಕ ಹಲ್ಲೆ ನಡೆಸಿತ್ತು. ದಾರಿಯ ವಿವಾದಕ್ಕೆ ನಡೆದ ಈ ಮಾತಿನ ಚಕಮಕಿ ಹೊಡೆದಾಟದಲ್ಲಿ ಅಂತ್ಯವಾಗಿತ್ತು. ಈ ಘಟನೆಯ ಬಳಿಕ ಹಲ್ಲೆಗೊಳಗಾದ ಮಾಜಿ ಸೈನಿಕನ ಶಿವಾಜಿ ಕುಟುಂಬ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತು. ಈ ಸಂದರ್ಭದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವಲ್ಲಿ ಪೊಲೀಸರು ವಿಳಂಬ ಮಾಡಿದ್ದಾರೆ. ಪೊಲೀಸರು ಆರೋಪಿಗಳ ಪರ ನಿಂತಿದ್ದಾರೆ ಎಂದು ಶಿವಾಜಿ ಕುಟುಂಬಸ್ಥರು ಆರೋಪಿಸಿದ್ದಾರೆ.ಘಟನೆ ನಡೆದ ಎರಡು ದಿನದ ಬಳಿಕ ಪೊಲೀಸರು ಕೆಲ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು ಕೂಡ ಮುಖ್ಯ ಆರೋಪಿಗಳನ್ನು ಕೈ ಬಿಟ್ಟು ಕೆಲವರನ್ನ ಮಾತ್ರ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಜತೆಗೆ ರಾಜ್ಯ ಮಾಜಿ ಸೈನಿಕರ ಸಂಘಟನೆಯವರು ಈ ಆರೋಪಕ್ಕೆ ಬಲ ನೀಡಿ ಕೂಡಲೇ ಹಲ್ಲೆ ನಡೆಸಿದವರ ವಿರುದ್ದ ಕಠಿಣ ಕ್ರಮ ಆಗಬೇಕೆಂದು ಆಗ್ರಹಿದ್ದಾರೆ. ಈ ಬೆನ್ನಲ್ಲೆ ಹಲ್ಲೆ ನಡೆಸಿದವರ ಪರವಾಗಿ ಇಲ್ಲಿನ ಮುಖಂಡನೋರ್ವ ಬಾಬು ಜೊಸೇಪ್ ಎನ್ನುವವನು ಮಾಜಿ ಸೈನಿಕನ ಕುಟುಂಬಕ್ಕೆ ಜೀವ ಬೆದರಿಕೆ ಹಾಕುತ್ತಿದ್ದಾನಂತೆ. ಹೀಗೆ ಹತ್ತು ಹಲವು ದಾರಿಯಲ್ಲಿ ಮಾಜಿ ಸೈನಿಕನ ಕುಟುಂಬ ಅನ್ಯಾಯ ಅನುಭವಿಸುತ್ತಿದೆ. ಪೊಲೀಸ್ ಇಲಾಖೆ ನ್ಯಾಯದ ಪರ ನಿಂತು ಹಲ್ಲೆ ನಡೆಸಿದವರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿದ್ದಾರೆ.