ಹಾಸನ,- ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಹಿರೀಸಾವೆ ಪೊಲೀಸ್ ಠಾಣಾ ಸರಹದ್ದಿನ ಕಮವರಳ್ಳಿಯಲ್ಲಿ ವಾರದ ಹಿಂದೆ ನಡೆದಿದ್ದ ಬೆಂಗಳೂರಿನ ಕುಖ್ಯಾತರೌಡಿ ಶೀಟರ್ ಲಿಂಗರಾಜನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, 16 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೋಹನ @ ಡಬ್ಬಲ್ ಮೀಟರ್ ಮೋಹನ, ನಂಜಪ್ಪ @ ನಂಜ @ ಕರಿಯ, ನಾಗರಾಜ @ ನಾಗ, ಗ್ರೇಸ್ ವಾಲ್ಟರ್ @ ವಾಲ್ಟರ್, ನವೀನ್ ಕುಮಾರ, ಪ್ರದೀಪ @ ದಾಸರಹಳ್ಳಿ ಪ್ರದೀಪ, ಸುನೀಲ್ಕುಮಾರ @ ಸುನೀಲ್, ರಮೇಶ, ಪಾರ್ಥಿಬನ್ @ ಪಾರ್ಥಿ, ಕಣ್ಣನ್ @ ಕಣ್ಣ, ವೇಲು, ಸುರೇಶ .ಎನ್. ಮನೋಹರ @ ಮನು, ದರ್ಶನ, ಸುದೀಪ, ಮತ್ತು ಮಂಜುನಾಥ ಬಂಧಿತ ಆರೋಪಿಗಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸಗೌಡ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
# ಪ್ರಕರಣದ ವಿವರ:-
ಹಿರೀಸಾವೆ ಪೊಲೀಸ್ ಠಾಣಾ ಸರಹದ್ದಿನ ಕಮವರಳ್ಳಿ ಗ್ರಾಮದ ವಾಸಿ ರೌಡಿ ಶೀಟರ್ ಲಿಂಗರಾಜ ಎಂಬಾತನು ಬೆಂಗಳೂರು ನಗರದ ಶಾಂತಿನಗರದಲ್ಲಿದ್ದುಕೊಂಡು ರಿಯಲ್ಎಸ್ಟೇಟ್ ವ್ಯವಹಾರ ನಡೆಸಿಕೊಂಡು ರೌಡಿ ಚಟುವಟಿಕೆ ನಡೆಸಿ, ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದನು.
ಕರೋನಾ ಹಾವಳಿ ಹಿನ್ನೆಲೆಯಲ್ಲಿ ತನ್ನ ಸ್ವಗ್ರಾಮವಾದ ಕಮರವಳ್ಳಿಯ ಲ್ಲಿರುವ ತನ್ನ ಜಮೀನಿನಲ್ಲಿ ನಿರ್ಮಿಸಿರುವ ಮನೆಗೆ ಬಂದು ವಾಸವಿದ್ದನು. ಹೀಗಿರುವಾಗ ಡಿಸೆಂಬರ್ 8 ರಂದು ರಾತ್ರಿ 9.45 ಗಂಟೆ ಸಮಯದಲ್ಲಿ ಲಿಂಗರಾಜು ಕಮರವಳ್ಳಿಯ ತನ್ನ ಜಮೀನಿನ ಮನೆಯಲ್ಲಿ ಮಲಗಿರುವಾಗ ಯಾರೋ 7 ರಿಂದ 8 ಜನರು ಕಾರು ಮತ್ತು ಬೈಕಿನಲ್ಲಿ ಲಿಂಗರಾಜು ವಾಸವಿದ್ದ ಮನೆ ಹತ್ತಿರ ಬಂದು ಲಿಂಗರಾಜನ ಮೇಲೆ ಇದ್ದ ರಿಯಲ್ ಎಸ್ಟೇಟ್ ವ್ಯವಹಾರದ ದ್ವೇಷಕ್ಕೋ ಅಥವಾ ಹಳೆಯ ಇನ್ನಾವುದೋ ದ್ವೇಷದಿಂದಲೋ ಲಿಂಗರಾಜ ಮನೆಯ ಬಾಗಿಲನ್ನು ಹ್ಯಾಮರ್ನಿಂದ ಒಡೆದು, ಮನೆಯೊಳಗೆ ನುಗ್ಗಿ ಮನೆಯಲ್ಲಿ ಮಲಗಿದ್ದ ಲಿಂಗರಾಜನನ್ನು ಹ್ಯಾಮರ್ ಮತ್ತು ಮಚ್ಚುಗಳಿಂದ ಕೊಲೆ ಮಾಡಿ, ಸಾಕ್ಷ್ಯನಾಶಪಡಿಸಲು ಸದರಿ ಮನೆಯಲ್ಲಿ ಅಳವಡಿಸಿದ್ದ ಸಿ.ಸಿ ಟಿ.ವಿ.ಯ ಡಿ.ವಿ.ಆರ್ ಅನ್ನು ಕಿತ್ತುಕೊಂಡು ಹೋಗಿದ್ದರು. ಈ ಸಂಬಂಧ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿತ್ತು.