ಬೆಳಗಾವಿ, ಡಿ.5- ದೀರ್ಘಕಾಲದಿಂದ ಚರ್ಚೆಯಾಗುತ್ತಿರುವ ಸಂಪುಟ ವಿಸ್ತರಣೆ ಶೀಘ್ರದಲ್ಲೆ ನಡೆಯುವ ಸಾಧ್ಯತೆಯಿದೆ. ಐವರು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಕೇಂದ್ರ ನಾಯಕರು ಅನುಮೋದನೆ ನೀಡಲಿದ್ದಾರೆ. ಸಂಪುಟ ವಿಸ್ತರಣೆ ಜವಾಬ್ದಾರಿಯನ್ನು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ಹೇಳಲಾಗಿದೆ.
ಆರ್ .ಶಂಕರ್, ಎಂಟಿಬಿ ನಾಗರಾಜ್, ಮುನಿರತ್ನ , ಉಮೇಶ್ ಕತ್ತಿ ಮತ್ತು ಸಿಪಿ ಯೋಗೇಶ್ವರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದು ಉನ್ನತ ಮೂಲಗಳ ಮಾಹಿತಿ ತಿಳಿಸಿವೆ. ಬಿಜೆಪಿ ಸರ್ಕಾರ ರಚನೆಯಾದಾಗಿನಿಂದಲೂ 8 ಬಾರಿ ಶಾಸಕರಾಗಿರುವ ಹುಕ್ಕೇರಿಯ ಉಮೇಶ್ ಕತ್ತಿ ನಿರಂತರವಾಗಿ ಲಾಬಿ ನಡೆಸುತ್ತಲೇ ಬಂದಿದ್ದಾರೆ, ಹೀಗಾಗಿ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ಖಚಿತ ಎಂದು ಹೇಳಲಾಗುತ್ತಿದೆ. ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡಿದರೇ ಬೆಳಗಾವಿ ಐವರು ಶಾಸಕರಿಗೆ ಸಚಿವ ಸ್ಥಾನ ದೊರಕಿದಂತಾಗುತ್ತದೆ.
ವಿಧಾನಮಂಡಲ ಅಧಿವೇಶನಕ್ಕೆ ಮುನ್ನವೇ ಸಚಿವ ಸಂಪುಟ ವಿಸ್ತರಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಆಸಕ್ತಿ ಹೊಂದಿದ್ದು, ಬೆಳಗಾವಿ ಸಭೆಗಳತ್ತ ಆಕಾಂಕ್ಷಿಗಳು ಚಿತ್ತ ನೆಟ್ಟಿದ್ದಾರೆ. ಮಹತ್ವದ ಮಸೂದೆ, ವಿಷಯಗಳು ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ. ಪ್ರತಿಪಕ್ಷಗಳ ಸವಾಲು ಸಮರ್ಥವಾಗಿ ನಿಭಾಯಿಸಲು ಹುರುಪುಳ್ಳ ತಂಡವೂ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಒತ್ತಡ ಮುಕ್ತವಾಗಿ ಅಧಿವೇಶನ ಎದುರಿಸಬೇಕು ಎನ್ನುವುದು ಬಿಎಸ್ವೈ ಆಸಕ್ತಿ ಹಿಂದಿರುವ ಲೆಕ್ಕಾಚಾರ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.
ಸೋಮವಾರದಿಂದ ಅಧಿವೇಶನ ಆರಂಭವಾಗಲಿದೆ. ಅದಕ್ಕೂ ಮುಂಚೆ ಮಂತ್ರಿ ಮಾಡಿ ಎಂದು ಹಲವರು ಒತ್ತಡ ಹೇರಿದ್ದು, ವಿಳಂಬಕ್ಕೆ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಅಧಿವೇಶನ, ಗ್ರಾಪಂ ಚುನಾವಣೆ ಬಳಿಕ ಬಿಬಿಎಂಪಿ, ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆ ಘೋಷಣೆ ಸಾಧ್ಯತೆಗಳಿವೆ. ಇದರಿಂದಾಗಿ ಮತ್ತೆರಡು ತಿಂಗಳು ಕಾದು ಕುಳಿತುಕೊಳ್ಳಬೇಕಾಗುತ್ತದೆ. ಹೀಗಾಗಿ ಆದಷ್ಟು ಬೇಗ ವರಿಷ್ಠರನ್ನು ಒಪ್ಪಿಸಿ ಎಂದು ಬಿಎಸ್ವೈಗೆ ಕೆಲವು ಶಾಸಕರು ದುಂಬಾಲು ಬಿದ್ದಿದ್ದಾರೆ.