ಬೆಂಗಳೂರು, ನ.30-ಆಡಳಿತರೂಢ ಬಿಜೆಪಿಯಲ್ಲಿ ಉಂಟಾಗಿರುವ ನಾಯಕತ್ವ ಗೊಂದಲ, ಸಂಪುಟ ವಿಸ್ತರಣೆ/ ಪುನರಾಚನೆ, ನಿಗಮ ಮಂಡಳಿ ನೇಮಕಾತಿಯ ಅಸಮಾಧಾನ, ಸೇರಿದಂತೆ ಕಾಡುತ್ತಿರುವ ನಾನಾ ಗೊಂದಲಗಳಿಗೆ ಈ ವಾರ ಪರಿಹಾರ ಸಿಗುತ್ತದೆಯೇ ಎಂಬ ಕಾತರ ನಾಯಕರಲ್ಲಿ ಮನೆ ಮಾಡಿದೆ.
ಉಪಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಭಾರೀ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಕಳೆದ ಒಂದು ವಾರದಿಂದ ನಡೆಯುತ್ತಿರುವ ಬೆಳವಣಿಗೆಗಳು ಕಮಲ ನಾಯಕರನ್ನು ನಿದ್ದೆಗೇಡುವಂತೆ ಮಾಡಿದೆ.
ಮನೆಯೊಂದು ಮೂರು ಬಾಗಿಲು ಎಂಬಂತಾಗಿರುವ ಪಕ್ಷದ ಸ್ಥಿತಿಗತಿಗೆ ರಾಷ್ಟ್ರೀಯ ನಾಯಕರು ಈ ವಾರದ ಅಂತ್ಯದೊಳಗೆ ಪರಿಹಾರ ಕೊಡುವರೇ ಎಂಬ ಪ್ರಶ್ನೆ ಎಲ್ಲಾರಲ್ಲೂ ಕಾಡುತ್ತಿದೆ. ಈಗಾಗಲೇ ಪಕ್ಷ ಹಾಗೂ ಸರ್ಕಾರಕ್ಕೆ ಈ ಬೆಳವಣಿಗೆಗಳಿಂದ ಭಾರೀ ಮುಜುಗರ ಉಂಟಾಗಿದ್ದು, ತಕ್ಷಣವೇ ರಾಷ್ಟ್ರೀಯ ನಾಯಕರು ಮಧ್ಯ ಪ್ರವೇಶ ಮಾಡಬೇಕೆಂದು ರಾಜ್ಯ ಘಟಕದ ನಾಯಕರು ಮನವಿ ಮಾಡಿದ್ದಾರೆ.
2023ರ ವರೆಗೆ ಯಡಿಯೂರಪ್ಪ ಅವರ ನಾಯಕತ್ವವನ್ನು ಮುಂದುವರೆಸಬೇಕು ಇಲ್ಲವೇ ಬದಲಾವಣೆ ಮಾಡುವುದಾದರೆ, ಯಾವುದಾದರೂ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ. ರಾಜ್ಯದಲ್ಲಿ ಈ ಬೆಳವಣಿಗೆಗಳು ಪದೇ ಪದೇ ಮರುಕಳುಹಿಸಿದರೆ, ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ.
ಜೊತೆಗೆ ಸದ್ಯದಲ್ಲೇ ಗ್ರಾಮ ಪಂಚಾಯತ್, ಬಿಬಿಎಂಪಿ ಮಸ್ಕಿ, ಬಸವಕಲ್ಯಾಣ , ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಕೂಡಲೇ ಎಲ್ಲಾ ಗೊಂದಲಗಳಿಗೆ ತೆರೆಎಳೆಯುವಂತೆ ರಾಜ್ಯ ಘಟಕ ಕೋರಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಆಗುತ್ತಾರೆ, ಅವರ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪುತ್ತದೆ ಎಂಬ ವಿಷಯಗಳೇ ಕಳೆದ ವಾರವಿಡೀ ರಾಜ್ಯ ರಾಜಕಾರಣವನ್ನು ಆವರಿಸಿಕೊಂಡಿತ್ತು.
ಯಡಿಯೂರಪ್ಪನವರು ಹೈಕಮಾಂಡಿನ ಮೇಲೆ ಒತ್ತಡ ಹಾಕಬಹುದಾದ ಕ್ರಮಗಳಿಗೆ ಮುಂದಾಗುವ ಮೂಲಕ ಸಾಕಷ್ಟು ಮುಜುಗರ ಉಂಟು ಮಾಡಿದ್ದರು.ಕಳೆದ ಮುರು ತಿಂಗಳಿನಿಂದ ತಮ್ಮ ಸಂಪುಟಕ್ಕೆ ಹೊಸಬರನ್ನು ಸೇರಿಸಿಕೊಳ್ಳಲು ಸಾಧ್ಯವಾಗದಿರುವುದು ಯಡಿಯೂರಪ್ಪ ಅವರ ಪಿತ್ತವನ್ನು ನೆತ್ತಿಗೇರಿಸಿದೆ.
ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಾಗದೇ ಹೋದರೂ ಆಪ್ತ ವಲಯದಲ್ಲಿ ಯಡಿಯೂರಪ್ಪ ಸಾಕಷ್ಟು ಬೇಸರ ತೋಡಿಕೊಂಡಿದ್ದಾರೆ.ಈ ಮಧ್ಯೆ ಲಿಂಗಾಯತ ನಿಗಮ ಮತ್ತು ಮೀಸಲಾತಿ ವಿಚಾರವಾಗಿ ಬಿಎಸ್ವೈ ನಡೆ ಹೈಕಮಾಂಡಿಗೆ ಸಾಕಷ್ಟು ಇರಿಸುಮುರಿಸು ತಂದಿರುವುದೂ ನಿಜ.ಬಿಎಸ್ವೈ ಅವರ ಈ ನಡೆಯಿಂದಾಗಿ ಹೈಕಮಾಂಡ್ ತನ್ನ ಹಠ ಬಿಟ್ಟು ಸಂಪುಟ ವಿಸ್ತರಣೆಗೆ ಅನುಮತಿ ನೀಡಬಹುದು ಎಂಬುದು ಸಿಎಂ ಆಪ್ತರ ನಿರೀಕ್ಷೆಯಾಗಿದೆ.