ಬೆಂಗಳೂರು,ನ.27- ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿದ್ದು, ಒಂದು ಕಡೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಸದರ ಸಭೆ ಕರೆದಿರುವ ಬೆನ್ನಲ್ಲೇ, ದೆಹಲಿಯಲ್ಲಿ ಲಾಬಿ ಶುರುವಾಗಿದೆ. ಸಚಿವ ಸಂಪುಟ ವಿಸ್ತರಣೆ ಪಕ್ಕಾ ಆಗುತ್ತಿದ್ದಂತೆ, ಮೂಲ ಬಿಜೆಪಿಗರು ತಕರಾರು ಎತ್ತಿದಂತೆ ಕಾಣುತ್ತಿದೆ.
ನಿನ್ನೆಯಷ್ಟೆ 17 ಮಂದಿಯಿಂದ ಸರ್ಕಾರ ಅಸ್ತಿತ್ವಕ್ಕೆ ಬಂದಿಲ್ಲ. 105 ಶಾಸಕರಿಂದ ಈ ಸರ್ಕಾರ ಅಕಾರಕ್ಕೆ ಬಂದಿದೆ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ ಬೆನ್ನಲ್ಲೇ, ಇದೀಗ ಗುಂಪು ರಾಜಕೀಯ ಶುರುವಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಚೇರಿ ಪೂಜೆ ನೆಪದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಆರ್. ಸಚಿವ ಆರ್.ಅಶೋಕ್ ದೆಹಲಿಗೆ ಹಾರಿದ್ದಾರೆ. ಬಿಜೆಪಿ ವರಿಷ್ಠ ಜೆ.ಪಿ.ನಡ್ಡಾ ಕೂಡ ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆ ಇದ್ದು, ಅಲ್ಲಿ ಭೇಟಿ ಮಾಡುವ ಸಾಧ್ಯತೆಯಿದೆ.
ಕೇಂದ್ರದ ನಾಯಕರನ್ನು ಭೇಟಿ ಮಾಡಿ ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲು ಹಲವು ಸಚಿವರು ದೆಹಲಿಗೆ ತೆರಳಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ. ಕಚೇರಿ ಉದ್ಘಾಟನೆ ಕೇವಲ ನೆಪವಷ್ಟೆ ಎನ್ನಲಾಗಿದೆ. ಇನ್ನೊಂದೆಡೆ, ವಲಸಿಗ ತಂಡದ ಅನಾಯಕರಂತೆ ಬಿಂಬಿಸಿಕೊಂಡಿರುವ ಸಚಿವ ರಮೇಶ್ ಜಾರಕಿಹೊಳಿ, ಸರ್ಕಾರ ರಚನೆಗೆ ಕಾರಣರಾದವರ ಪರ ನಿಂತಿದ್ದಾರೆ. ಜೆ.ಪಿ. ನಡ್ಡಾ ಭೇಟಿಗೆ ದಿನವಿಡಿ ಕಾದಿರುವ ಜಾರಕಿಹೊಳಿಗೆ ಇನ್ನೂ ಬುಲಾವ್ ಸಿಕ್ಕಿಲ್ಲ.
ಒಂದು ವೇಳೆ ಶ್ರೀಮಂತ ಪಾಟೀಲ್ರನ್ನು ಸಂಪುಟದಿಂದ ಕೈಬಿಟ್ಟರೆ ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಮುಂದೆ ಪ್ರಸ್ತಾಪ ಮುಂದಿಡಲು ಬಯಸಿದ್ದಾರೆ ಎನ್ನಲಾಗಿದೆ. ಸಿ.ಪಿ. ಯೋಗೇಶ್ವರ್ ಅವರನ್ನು ದಿಢೀರನೆ ದೆಹಲಿಗೆ ಕರೆಸಿಕೊಂಡಿರುವುದೂ ಕುತೂಹಲ ಮೂಡಿಸಿದೆ.
ಇದೇ ಸಂದರ್ಭದಲ್ಲಿ ಕೆಲವು ಸಚಿವರು ದೆಹಲಿಗೆ ಮತ್ತೆ ಕೆಲವು ಸಚಿವರು ಹೈದರಾಬಾದ್ಗೆ ತೆರಳಿರುವುದು ಕುತೂಹಲ ಮೂಡಿಸಿದೆ. ಅದರ ಬೆನ್ನಲ್ಲೇ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೈದರಾಬಾದ್ಗೆ ತೆರಳಿದ್ದಾರೆ. ಶಾಸಕ ಶಿವನಗೌಡ ನಾಯ್ಕ್, ಎಂಎಲ್ ಸಿ ಪುಟ್ಟಣ್ಣ ದೆಹಲಿಗೆ ತೆರಳಿದ್ದಾರೆ, ಕ್ಯಾಬಿನೆಟ್ ವಿಸ್ತರಣೆ ಅಥವಾ ಪುನಾರಚನೆಗಾಗಿ ಸಿಎಂ ಯಡಿಯೂರಪ್ಪ ಕೇಂದ್ರ ನಾಯಕರ ಅನುಮೋದನೆಗಾಗಿ ಕಾಯುತ್ತಿರುವ ಬೆನ್ನಲ್ಲೆ ಸಚಿವರ ದೆಹಲಿ ಭೇಟಿ ಮಹತ್ವ ಪಡೆದಿದೆ.
ಕಳೆದ ವಾರ ದೆಹಲಿಗೆ ತೆರಳಿದ್ದ ಸಿಎಂ ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಅನುಮೋದನೆ ಕೇಳಿದ್ದರು. ಇತ್ತೀಚೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಕೂಡ ಬೆಂಗಳೂರಿಗೆ ಆಗಮಿಸಿ ಸಿಎಂ ಜೊತೆ ಚರ್ಚಿಸಿದ್ದರು.
ಸಿಎಂ ದೆಹಲಿಯಿಂದ ವಾಪಸ್ ಬಂದ ನಂತರ ಹಲವು ರಾಜ್ಯ ನಾಯಕರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿದ್ದರು, ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ತಮ್ಮ ಜೊತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎಲ್ಲಾ ಶಾಸಕರಿಗೂ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.
ಈ ಬೆಳವಣಿಗೆಗಳ ಮಧ್ಯೆ, ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ಸಚಿವೆ ಶಶಿಕಲಾ ಜೊಲ್ಲೆ, ನಾನ್ಯಾಕೆ ಸಚಿವೆ ಸ್ಥಾನ ತ್ಯಾಗ ಮಾಡಲಿ.
ಸಂಪುಟದಲ್ಲಿ ಇರೋದು ನಾನೊಬ್ಬಳೇ ಸಚಿವೆ ಅಂತ ಸೆಡ್ಡು ಹೊಡೆದಿದ್ದಾರೆ. ನಿನ್ನೆಯಷ್ಟೇ ಸುತ್ತೂರು ಶ್ರೀಗಳ ಎದುರು ಸಿಎಂ ಯಡಿಯೂರಪ್ಪ ವಿರುದ್ಧ ಸಂಸದ ಶ್ರೀನಿವಾಸ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಶ್ರೀನಿವಾಸ್ ಪ್ರಸಾದ್ ಅಳಿಯ ಹಾಗೂ ನಂಜನಗೂಡು ಶಾಸಕ ಹರ್ಷವರ್ಧನ್, ಮೈಸೂರು ಭಾಗದ ದಲಿತ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಇವೆಲ್ಲದರ ಮಧ್ಯೆ, ಸಂಜೆ ಸಂಸದರ ಅನೌಪಚಾರಿಕ ಸಭೆಯನ್ನು ಸಿಎಂ ಕರೆದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೈಕಮಾಂಡ್ನಿಂದ ಇನ್ನೂ ಯಾವುದೇ ಸಂದೇಶ ಬಂದಿಲ್ಲ. ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಬೇಡಿಕೆ ಇಟ್ಟುಕೊಂಡು ಎರಡು ಬಾರಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಬಂದಿದ್ದಾರೆ. ಆದರೆ ಯಾವುದೇ ಉಪಯೋಗವಾಗಿಲ್ಲ.
ದೆಹಲಿಯಿಂದ ಹಿಂದಿರುಗಿದ ಬಳಿಕ ಮಾತನಾಡಿದ್ದ ಯಡಿಯೂರಪ್ಪ ಅವರು, ಎರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಅಥವಾ ಪನಾರಚನೆಗೆ ಹೈಕಮಾಂಡ್ ಆದೇಶ ಕೊಡಲಿದೆ ಎಂದಿದ್ದರು. ಅದಾಗಿ ಒಂದು ವಾರವಾಗುತ್ತ ಬಂದರೂ ಹೈಕಮಾಂಡ್ ಏನೂ ಹೇಳುತ್ತಿಲ್ಲ. ಹೀಗಾಗಿ ಬಿಜೆಪಿ ಗೊಂದಲದ ಗೂಡಾಗಿದೆ.