ಗೋಕಾಕ: ಇಂದಿನ ರಾಜ್ಯ ಸರ್ಕಾರ ಗೋಕಾಕ ಜಿಲ್ಲಾ ರಚನೆಯ ಆದೇಶವನ್ನು ಕೂಡಲೇ ಘೋಷಿಸಬೇಕೆಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿರುವ ಅವರು, ಸರ್ಕಾರವೇ ನೇಮಿಸಿದ ಆಯೋಗಗಳ ವರದಿಯನ್ನಾದರಿಸಿ ಸುಮಾರು ವರ್ಷಗಳ ಗೋಕಾಕ ಜಿಲ್ಲಾ ರಚನೆಯ ಹೋರಾಟಗಳ ಮನವಿಗೆ ಸ್ಪಂಧಿಸಿ ರಚನೆಯಾದ ಗೋಕಾಕ ಜಿಲ್ಲೆಯನ್ನು ರಾಜಕೀಯ ಕಾರಣಗಳಿಂದ ಅಸ್ಥಿತ್ವಕ್ಕೆ ತರಲು ಅಂದಿನ ಸರ್ಕಾರ ಹಿಂದೇಟು ಹಾಕಿದ್ದು, ಆದರೆ ಬದಲಾದ ಸನ್ನಿವೇಶದಲ್ಲಿ ಇಂದಿನ ಸರ್ಕಾರ ಕೂಡಲೇ ಗೋಕಾಕ ಜಿಲ್ಲಾ ರಚನೆಯ ಆದೇಶವನ್ನು ಘೋಷಿಸಬೇಕು ಎಂದಿದ್ದಾರೆ.
ಸರ್ಕಾರ ನೇಮಿಸಿದ ಯಾವುದೇ ಆಯೋಗಗಳು ಶಿಪಾರಸ್ಸು ಮಾಡದೇ ಇದ್ದರೂ ಸಹ ಕೇವಲ ರಾಜಕೀಯ ಹಿತಾಸಕ್ತಿಗಳಿಗೆ ಪೂರಕವಾಗಿ ಹೊಸ ಜಿಲ್ಲೆಗಳ ಅಸ್ಥಿತ್ವ ಬರುತ್ತಿವೆ. ಇದಕ್ಕೆ ಅಲ್ಲಿಯ ರಾಜಕೀಯ ಮುಖಂಡರ ಇಚ್ಚಾಶಕ್ತಿಯ ಒತ್ತಡವೇ ಕಾರಣವಾಗಿದೆ. ಆದರೆ ಗೋಕಾಕ ಜಿಲ್ಲಾ ರಚನೆಯ ಹೋರಾಟ ಸುಮಾರು ವರ್ಷಗಳ ಇತಿಹಾಸವನ್ನು ಹೊಂದಿದೆ.
ಬ್ರಿಟಿಷರ ಆಡಳಿತ ಅವಧಿಯಲ್ಲಿಯೇ ಗೋಕಾಕ ಜಿಲ್ಲೆಯ ನಮೂದು ಈ ಹಿಂದಿನ ಸರಕಾರಿ ದಾಖಲೆಗಳಲ್ಲಿ ಇದೆ. ಈಗಾಗಲೇ ಗೋಕಾಕ ಜಿಲ್ಲಾ ರಚನೆಯ ವಾಸ್ತವತೆಯನ್ನು ಅರಿತ ಸರ್ಕಾರವೇ ನೇಮಿಸಿದ ಆಯೋಗಗಳು ಮಾಡಿದ ಶಿಪಾರಸ್ಸುಗಳಿಗೆ ಪೂರಕವಾಗಿಯೇ ಹಿಂದಿನ ಜೆ.ಎಚ್. ಪಟೇಲ್ ರವರ ನೇತೃತ್ವದ ಸರ್ಕಾರ ಗೋಕಾಕ ಜಿಲ್ಲಾ ರಚನೆಯ ಆದೇಶ ಮಾಡಿತ್ತು. ಆದರೆ ಪ್ರಭಲ ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದಾಗಿ ಸದರೀ ಆದೇಶವನ್ನು ಸ್ಥಗೀತಗೊಳಿಸಲಾಯಿತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಗೋಕಾಕ ಜಿಲ್ಲಾ ರಚನೆಯ ಹೋರಾಟ ಚುನಾಯಿತ ಪ್ರತಿನಿಧಿಗಳ ಮನಸ್ಥಿತಿಗೆ ಪೂರಕವಾಗಿ ಇರದೇ ಜಿಲ್ಲಾ ರಚನೆಯ ದೃಢಸಂಕಲ್ಪಕ್ಕೆ ಪೂರಕವಾಗಿ ಇರಬೇಕೆಂದು ಹೋರಾಟಗಾರರಲ್ಲಿ ಮನವಿ ಮಾಡಿದ್ದಾರೆ.