ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Nerendra Modi) ಅವರಿಗೆ ಚೊಂಬು ತೋರಿಸಲು ಯತ್ನಿಸಿದ ಯುವ ಕಾಂಗ್ರೆಸ್ ಮುಖಂಡ ಮೊಹಮದ್ ನಲಪಾಡ್ (Mohammed Nalapad) ಅವರನ್ನು ಪೊಲೀಸರು (Bengaluru Police) ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಲೋಕಸಭಾ ಚುನಾವಣೆ(Lok sabha election) ಹಿನ್ನೆಲೆಯಲ್ಲಿ ಇಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮಿಸಿದ್ದಾರೆ.
ಸಮಾವೇಶದ ಬಳಿಕ ಮೋದಿ ಹಿಂದಿರುಗುತ್ತಿದ್ದರು, ಈ ವೇಳೆ ಮೇಖ್ರಿ ಸರ್ಕಲ್ ಬಳಿ ಮೋದಿಗೆ ಭದ್ರತಾ ಲೋಪ ಉಂಟಾಗಿದೆ. ರಸ್ತೆಗೆ ನುಗ್ಗಿ ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ನಲಪಾಡ್ ಚೊಂಬು ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಮೊಹಮ್ಮದ್ ನಲಪಾಡ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.
ಮೋದಿ ತೆರಳುವ ರಸ್ತೆ ಮಾರ್ಗದಲ್ಲಿ (ಮೇಖ್ರಿ ಸರ್ಕಲ್) ಅರ್ಧಗಂಟೆ ಮುಂಚೆಯೇ ಬಂದಿದ್ದ ನಲಪಾಡ್ ನಂಬರ್ ಇಲ್ಲದ ಕಾರಿನಲ್ಲಿ ಕಾದು ಕುಳಿತಿದ್ದರು. ಕಪ್ಪು ಬಣ್ಣದ ಲ್ಯಾಂಡ್ರೋವರ್ ಡಿಫೆಂಡರ್ ಕಾರಿನಲ್ಲಿ ನಲಪಾಡ್ ಜೊತೆಗೆ 8 ಜನ ಇದ್ದರು. ಮೋದಿ ತೆರಳುವ ಸಂದರ್ಭದಲ್ಲೇ ಚೊಂಬು ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸತೀಶ್ ಕುಮಾರ್, ರಮನ್ ಗುಪ್ತಾ ನೇತೃತ್ವದಲ್ಲಿ ಭದ್ರತೆ ಮಾಡಲಾಗಿತ್ತು. ಬಂದೋಬಸ್ತ್ಗಾಗಿ ನಾಲ್ವರು ಡಿಸಿಪಿ, ಎಸಿಪಿ, ಇನ್ಸ್ ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್, ಪೊಲೀಸ್ ಪೇದೆ, ಸಂಚಾರ ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಸಮಾವೇಶ ನಡೆಯುವ ಅರಮನೆ ಮೈದಾನ, ಹೆಲಿಪ್ಯಾಡ್ , ಮೇಕ್ರಿ ಸರ್ಕಲ್ ಹಾಗೂ ಬಳ್ಳಾರಿ ರಸ್ತೆಯಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿತ್ತು. ಆದರೂ ಈ ಅವಘಡ ಸಂಭವಿಸಿದೆ.