ನವದೆಹಲಿ: ‘ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯವು ಸಂಪೂರ್ಣ ಹದಗೆಟ್ಟಿದೆ. ಮಧುಮೇಹದಿಂದ ಬಳಲುತ್ತಿರುವ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರುಪೇರಾಗುತ್ತಿದೆ’ ಎಂದು ಆಮ್ ಆದ್ಮಿ ಪಕ್ಷದ(ಎಎಪಿ) ಮೂಲಗಳು ಬುಧವಾರ ಹೇಳಿವೆ.
ಅರವಿಂದ್ ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಒಂದು ಸಮಯದಲ್ಲಿ 46 ಎಂಜಿ ಗೆ ಇಳಿದಿತ್ತು. ವೈದ್ಯರ ಪ್ರಕಾರ ಇದು ಅತ್ಯಂತ ಗಂಭೀರ ಆರೋಗ್ಯ ಪರಿಸ್ಥಿತಿಯಾಗಿದೆ’ ಎಂದಿದೆ.
ಮಂಗಳವಾರ ಕೇಜ್ರಿವಾಲ್ ಅವರನ್ನು ಇ.ಡಿ ಕಸ್ಟಡಿಯಲ್ಲಿ ಭೇಟಿಯಾದ ಪತ್ನಿ ಸುನೀತಾ ಅವರು ಕೂಡ ಕೇಜ್ರಿವಾಲ್ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಅವರಿಗಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದ್ದರು.
ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಕಳೆದ ವಾರ ಕೇಜ್ರಿವಾಲ್ ಅವರನ್ನು ಇ.ಡಿ ಬಂಧಿಸಿತ್ತು. ಮಾರ್ಚ್ 28ರವರೆಗೆ ಇ.ಡಿ ಕಸ್ಟಡಿಯಲ್ಲಿ ಕೇಜ್ರಿವಾಲ್ ಅವರ ವಿಚಾರಣೆ ನಡೆಯಲಿದೆ.