ಬೆಂಗಳೂರು, ಮಾರ್ಚ್ 9: ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು (Bengaluru Water Crisis) ತೀವ್ರಗೊಂಡಿದೆ. ಇನ್ನೇನು ಬೇಸಗೆ ಆರಂಭವಾಗುತ್ತಿದ್ದಂತೆಯೇ ಈ ವರ್ಷ ಕುಡಿಯುವ ನೀರಿಗೂ ಹಲವೆಡೆ ಸಮಸ್ಯೆ ಎದುರಾಗಿದೆ.
ಈ ಮಧ್ಯೆ, ಅನೇಕ ಐಟಿ ಕಂಪನಿಗಳನ್ನು ಹೊಂದಿರುವ ವೈಟ್ಫೀಲ್ಡ್ (Whitefield) ಪ್ರದೇಶದಲ್ಲಿ ಕೂಡ ನೀರಿನ ಅಭಾವದ ಸುಳಿಯು ದೊರೆತಿದೆ.
ನೀರಿನ ಬಿಕ್ಕಟ್ಟು ಎದುರಿಸಲು ಮಾಡಿಕೊಂಡಿರುವ ಸಿದ್ಧತೆ ಬಗ್ಗೆ, ಬಹುತೇಕ ಐಟಿ ಸಂಸ್ಥೆಗಳನ್ನೇ ಒಳಗೊಂಡಿರುವ ವೈಟ್ಫೀಲ್ಡ್ ಏರಿಯಾ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಸೋಸಿಯೇಷನ್ (WACIA) ಮಾಹಿತಿ ನೀಡಿದೆ.
ಪೇಂಟಿಂಗ್ ಮತ್ತು ನಿರ್ಮಾಣ ಚಟುವಟಿಕೆಯಂಥಹ ತಕ್ಷಣಕ್ಕೆ ಅನಿವಾರ್ಯವಲ್ಲದ ಚಟುವಟಿಕೆಗಳನ್ನು ಮುಂದೂಡಿಕೆ ಮಾಡಲಾಗುತ್ತಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ರಾಜೇಶ್ ಮಲ್ಯ ಕೆ ತಿಳಿಸಿದ್ದಾರೆ.ಸುಮಾರು 5,000 ಉದ್ಯೋಗಿಗಳನ್ನು ಹೊಂದಿರುವ ಟೆಕ್ ಹಬ್ಗೆ ದಿನಕ್ಕೆ ಸುಮಾರು 1 ಲಕ್ಷ ಲೀಟರ್ ನೀರು ಬೇಕಾಗುತ್ತದೆ. ಇದು 10-12 ಟ್ಯಾಂಕರ್ ಲೋಡ್ಗಳಿಗೆ ಸಮನಾಗಿರುತ್ತದೆ ಎಂದು ಮಲ್ಯ ನೀರಿನ ಅಗತ್ಯದ ಬಗ್ಗೆ ಮಾಹಿತಿ ನೀಡಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ನೀರಿನ ಬಿಕ್ಕಟ್ಟು ಎದುರಿಸಲು ಸನ್ನದ್ಧವಾಗಿರಬೇಕಾದ, ಕೈಗಾರಿಕೆಗಳು ಅದಕ್ಕೆ ಹೊಂದಿಕೊಳ್ಳಬೇಕಾದ ಮತ್ತು ಸಮಸ್ಯೆ ಪರಿಹರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.