ಒಬ್ಬರು ಸಂಸ್ಕೃತ ವಿದ್ವಾಂಸರಾದರೆ ಮತ್ತೊಬ್ಬರು ಭಾರತದ ಈಗಿನ ಅತ್ಯುತ್ತಮ ಉರ್ದು ಕವಿ. ಬಾಲಿವುಡ್ ಸಿನಿಮಾ ಸಾಹಿತ್ಯವನ್ನು ತಮ್ಮ ಲೇಖನಿ ಮೂಲಕ ಎತ್ತರಕ್ಕೆ ಒಯ್ದವರಲ್ಲಿ ಪ್ರಮುಖರು ಗುಲ್ಜಾರ್. ದಶಕಗಳಿಂದಲೂ ಹಿಂದಿ ಸಿನಿಮಾ ಸಾಹಿತ್ಯದ ಜೊತೆ-ಜೊತೆಗೆ ಉರ್ದು ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಲೇ ಬಂದಿದ್ದಾರೆ ಗುಲ್ಜಾರ್. ಕೇವಲ ಲೇಖಕರಾಗಿ ಮಾತ್ರವೇ ತಮ್ಮ ಅನುಭವ, ಜ್ಞಾನವನ್ನು ಪಸರಿಸದೆ ನಿರ್ದೇಶಕರಾಗಿ, ಚಿತ್ರಕತೆ ಬರಹಗಾರರಾಗಿ, ಟಿವಿ ನಿರ್ದೇಶಕರಾಗಿ, ಡಾಕ್ಯುಮೆಂಟರಿ ನಿರ್ದೇಶಕರಾಗಿ ಹೀಗೆ ಹಲವು ಕ್ಷೇತ್ರಗಳಲ್ಲಿ ಕೃಷಿ ಮಾಡಿದವರು ಗುಲ್ಜಾರ್.
ಗುಲ್ಜಾರ್ ಮೂಲ ಹೆಸರು ಸಂಪೂರ್ಣ ಸಿಂಗ್. ಜನಿಸಿದ್ದು 1938ರಲ್ಲಿ, ಈಗಿನ ಪಾಕಿಸ್ತಾನಕ್ಕೆ ಸೇರಿರುವ ಪ್ರಾಂತ್ಯದಲ್ಲಿ. ಸ್ವಾತಂತ್ರ್ಯಾನಂತರ ಓದು ತ್ಯಜಿಸಿ ಬಾಂಬೆಗೆ ಬಂದ ಗುಲ್ಜಾರ್ ಜೀವನ ಸಾಗಿಸಲು ಹಲವು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದರು. ಕಾರು ರಿಪೇರಿ, ಅಪಘಾತವಾದ ಕಾರಿಗೆ ಬಣ್ಣ ಹಾಕುವ ಕೆಲಸ ಮಾಡುತ್ತಿದ್ದರು. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಗುಲ್ಜಾರ್, ‘ನನಗೆ ಬಣ್ಣ ಹಾಕುವ ಕೆಲಸ ಬಹಳ ಇಷ್ಟವಾಗಿದ್ದಾಗಿತ್ತು. ಬಣ್ಣಗಳು ನನಗೆ ಖುಷಿ ಕೊಡುತ್ತಿದ್ದವು. ಆ ಕೆಲಸ ಮಾಡುತ್ತಲೇ ನಾನು ಓದು ಮುಂದುವರೆಸಿದೆ, ಬರಹಗಾರರ ಅಸೋಸಿಯೇಷನ್ ಸಹ ಸೇರಿಕೊಂಡೆ. ಅಲ್ಲಿಂದ ನನ್ನ ಜೀವನದ ದಿಕ್ಕು ಬದಲಾಯ್ತು’ ಎಂದಿದ್ದರು.