ಬೆಂಗಳೂರು, ಡಿಸೆಂಬರ್ 28: ಲೋಕಸಭೆ ಭದ್ರತಾ ಲೋಪ ಪ್ರಕರಣದ ಬಳಿಕ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ (Pratap Simha) ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿವೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಎಫ್ಐಆರ್ ಸೇರಿದಂತೆ ಹಲವು ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ. ಈ ಮಧ್ಯೆ ಇದೀಗ ಅವರು ಪ್ರತಿನಿಧಿಸುವ ಮೈಸೂರು ಲೋಕಸಭಾ ಕ್ಷೇತ್ರವನ್ನು (Mysuru Lok Sabha Constituency) ಜೆಡಿಎಸ್ ಸೆಳೆಯುವ ಅಪಾಯ ಎದುರಾಗಿದೆ. ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಜೆಡಿಎಸ್ ಸೀಟು ಹಂಚಿಕೆ ಒಪ್ಪಂದದ ಮಾತುಕತೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಮೈಸೂರು ಕ್ಷೇತ್ರಕ್ಕೆ ಜೆಡಿಎಸ್ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.
ಪ್ರತಾಪ್ ಸಿಂಹ ಮೈಸೂರಿನಿಂದ ಎರಡು ಬಾರಿ ಸಂಸದರಾಗಿದ್ದಾರೆ. ನರೇಂದ್ರ ಮೋದಿ ಅವರ ಜೀವನ ಚರಿತ್ರೆಯ ಪುಸ್ತಕ ಬರೆಯುವುದರೊಂದಿಗೆ ಬಿಜೆಪಿ ನಾಯಕತ್ವಕ್ಕೆ ಹತ್ತಿರವಾದ ಮಾಜಿ ಪತ್ರಕರ್ತ, 2014 ಮತ್ತು 2019 ರಲ್ಲಿ ಎರಡು ಬಾರಿ ಬಿಜೆಪಿ ಟಿಕೆಟ್ ಪಡೆದಿದ್ದು, ಎರಡೂ ಬಾರಿ ಗೆದ್ದವರು. ಎರಡನೇ ಬಾರಿಗೆ ತಮ್ಮ ಗೆಲುವಿನ ಅಂತರವನ್ನು ಸುಮಾರು ಒಂದು ಲಕ್ಷ ಮತಗಳಿಂದ ಹೆಚ್ಚಿಸಿಕೊಂಡಿದ್ದಾರೆ.
ಕರ್ನಾಟಕ ಜೆಡಿಎಸ್ ನಾಯಕರು ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರನ್ನು ಭೇಟಿಯಾದ ಸಂದರ್ಭದಲ್ಲಿ, ಮೈಸೂರು-ಕೊಡಗು ಸ್ಥಾನವನ್ನು ಜೆಡಿಎಸ್ಗೆ ಬಿಟ್ಟುಕೊಡಬೇಕೆಂದು ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ.