ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಬುಧವಾರ ಅದ್ಧೂರಿ ರಾಜ್ಯೋತ್ಸವ ಆಚರಣೆ ನಡೆಯಿತು. ಈ ಉತ್ಸವದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಈ ಖುಷಿಯ ಸಂದರ್ಭದಲ್ಲಿ ದುರಾದೃಷ್ಟಕರ ಘಟನೆಯೂ ವರದಿಯಾಗಿದೆ.
ಮೆರವಣಿಗೆ ಬಳಿಕ ರಾತ್ರಿ 15 ಕಡೆ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಗಲಾಟೆ ನಡೆದಿದ್ದು, ಎರಡು ಕಡೆಯ ಇಬ್ಬರಿಗೆ ಚೂರಿ ಇರಿತವಾಗಿರುವ ಘಟನೆ ಕೂಡ ನಡೆದಿದೆ.
ಚನ್ನಮ್ಮ ವೃತ್ತದ ಬಳಿಯ ರಸ್ತೆಯಲ್ಲಿ ನಡೆದ ಗಲಾಟೆಯಲ್ಲಿ ಚಿಕ್ಕೋಡಿ ತಾಲೂಕಿನ ಕರೋಶಿಯ 22 ವರ್ಷದ ಜೋತಿಬಾ ಪವಾರ್ ಹಾಗೂ ಯಮಕನಮರಡಿಯ 23 ವರ್ಷದ ಆಕಾಶ್ ಪಾತರೂಟ ಚೂರಿ ಇರಿತಕ್ಕೆ ಒಳಗಾಗಿದ್ದಾರೆ. ಹೀಗೆ ಚೂರಿ ಇರಿತಕ್ಕೆ ಒಳಗಾದ ಯುವಕರನ್ನು ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅದೇ ರೀತಿ ಕ್ಷುಲ್ಲಕ ಕಾರಣಕ್ಕಾಗಿ ಚನ್ನಮ್ಮ ವೃತ್ತ, ಶನಿವಾರ ಕೂಟ, ಕ್ಲಬ್ ರಸ್ತೆ, ಕಾಲೇಜು ರಸ್ತೆ ಸೇರಿದಂತೆ 15 ಕಡೆ ಗಲಾಟೆ ಉಂಟಾಗಿದೆ. ಕನ್ನಡ ಡಾಲ್ಬಿ ಹಾಡಿಗೆ ಕುಣಿದು ಕುಪ್ಪಳಿಸುವಾಗ ಧ್ವಜ ಹಾರಾಟ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಅಲ್ಲಲ್ಲಿ ಯುವಕರ ನಡುವೆ ಗಲಾಟೆಗಳು ನಡೆದಿವೆ ಎಂದು ವರದಿಯಾಗಿದೆ. ಒಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದರೂ ಐದು ಲಕ್ಷಕ್ಕೂ ಅಧಿಕ ಜನ ಸಮಾವೇಶಗೊಂಡಿದ್ದರಿಂದ ಗಲಾಟೆ, ನೂಕಾಟ, ತಳ್ಳಾಟದ ವರದಿಗಳು ಆಗಿವೆ. ಇನ್ನು 80ಕ್ಕೂ ಹೆಚ್ಚು ಜನರ ಮೊಬೈಲ್ ಸೇರಿ ಅನೇಕರ ಪರ್ಸ್ ಗದ್ದಲದಲ್ಲಿ ಕಳ್ಳರು ಲಪಟಾಯಿಸಿರುವ ಪ್ರಕರಣಗಳು ಕಂಡು ಬಂದಿವೆ.
ಹಣದ ವಿಚಾರಕ್ಕೆ ವ್ಯಕ್ತಿಯ ಕೊಲೆ : ಹಣದ ವಿಚಾರಕ್ಕೆ ಯುವಕನೊಬ್ಬನನ್ನು ಕೊಲೆ ಮಾಡಿ ಕೆರೆಗೆ ಬಿಸಾಕಿದ್ದ ಘಟನೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಪೊಲೀಸರು ಪ್ರಮುಖ ಆರೋಪಿಯನ್ನು (ಅಕ್ಟೋಬರ್ 31-2023) ಸೋಮವಾರ ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಬಾಳ ಸೀಮಾದಲ್ಲಿನ ಕೆರೆಯೊಂದರಲ್ಲಿ ಅ. 4 ರಂದು ಯುವಕನ ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಕೆರೆಗೆ ಬಿಸಾಕಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಪ್ರಕರಣ ಬೆನ್ನಟ್ಟಿದ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಪ್ರಕರಣದ ನಂತರ ತಲೆಮರೆಸಿಕೊಂಡಿದ್ದ ಪ್ರಮುಖ (ಎ1) ಆರೋಪಿ ಜಡ್ಡಾ ನಾರಾಯಣಸ್ವಾಮಿಯನ್ನು ನಿನ್ನೆ (ಸೋಮವಾರ) ಬಂಧಿಸಲಾಗಿದೆ ಎಂದು ಕೊಪ್ಪಳ ಎಸ್ಪಿ ಯಶೋಧಾ ವಂಟಗೋಡಿ ತಿಳಿಸಿದ್ದರು.