ಅಲಿಭಾಗ್, ನ.5-ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿತರಾಗಿ ನ್ಯಾಯಾಂಗ ವಶದಲ್ಲಿರುವ ರಿಪಬ್ಲಿಕ್ ಟವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ರಾಯ್ಗಢ ಜಿಲ್ಲೆಯ ಅಲಿಭಾಗ್ ಬಂಧೀಖಾನೆಗಾಗಿ ಕೋವಿಡ್-19 ಕೇಂದ್ರವಾಗಿ ಪರಿವರ್ತಿತವಾಗಿರುವ ಸ್ಥಳೀಯ ಶಾಲೆಯೊಂದರಲ್ಲಿ ರಾತ್ರಿ ಕಳೆದರು. ಈ ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿ ಮತ್ತು ಇನ್ನಬರಿಗೆ ಅಲಿಭಾಗ್ ಸ್ಥಳೀಯ ನ್ಯಾಯಾಲಯವೊಂದು ನವೆಂಬರ್ 18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಅರ್ನಬ್ ಅವರನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಅಲಿಭಾಗ್ಪೆÇಲೀಸರು ಕೋರಿದ್ದರು. ಆದರೆ ಕೋರ್ಟ್, ಕಸ್ಟಡಿ ವಿಚಾರಣೆ ಅಗತ್ಯವಿಲ್ಲ ಎಂದು ತಿಳಿಸಿತ್ತು. ನಿನ್ನೆ ರಾತ್ರಿ ಹಿರಿಯ ಪತ್ರಕರ್ತರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ನಂತರ ಅವರನ್ನು ಅಲಿಭಾಗ್ ನಗರ ಪರಿಷದ್ ಶಾಲೆಗೆ ಪೊಲೀಸರು ಕರೆದೊಯ್ದು ನ್ಯಾಯಾಂಗ ಬಂಧನಕ್ಕೆ ಇರಿಸಿದರು.
ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್ಪಿ) ಹಗರಣದಲ್ಲಿ ಈಗಾಗಲೇ ರಿಪಬ್ಲಿಕ್ ಟಿವಿ ಭಾರೀ ವಿವಾದಕ್ಕೆ ಸಿಲುಕಿರುವಾಗಲೇ ಅದರ ಮುಖ್ಯಸ್ಥ ಗೋಸ್ವಾಮಿ ಅವರನ್ನು ಪೊಲೀಸರು ಬಂಧಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಅರ್ನಬ್ ಬಂಧನ ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರದ ನಡುವೆ ಸಂಘರ್ಷಕ್ಕೂ ಕಾರಣವಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ವಾಸ್ತು ಶಿಲ್ಪಿ ಅನ್ವಯ್ ನಾಯಕ್ (53) ಮತ್ತು ಅವರ ತಾಯಿ ಆತ್ಮಹತ್ಯೆಗೆ ಶರಣಾಗಿದ್ದರು.
ಅರ್ನಬ್ ಗೋಸ್ವಾಮಿ ಮಾಲೀಕತ್ವದ ರಿಪಬ್ಲಿಕ್ ಟಿವಿ ಅನ್ವಯ್ ನಾಯಕ್ ಅವರಿಗೆ ಬಾಕಿ ಹಣ ನೀಡಬೇಕಿತ್ತು. ಈ ಸಂಬಂದ ವಾದ-ವಿವಾದ ಉಂಟಾದ ನಂತರ ವಾಸ್ತುಶಿಲ್ಪಿ ಮತ್ತು ಅವರ ತಾಯಿ 2018ರ ಮೇ ತಿಂಗಳಿನಲ್ಲಿ ಸಾವಿಗೆ ಶರಣಾಗಿದ್ದರು.
ಈ ಪ್ರಕರಣದ ಸಂಬಂದ ಅಲಿಭಾಗ್ ಠಾಣೆ ಪೊಲೀಸರು ಇಂದು ಮುಂಜಾನೆ ಅರ್ನಬ್ ಗೋಸ್ವಾಮಿ ಅವರ ಮನೆಗೆ ತೆರಳಿ ವಾರ್ತಾ ವಾಹಿನಿ ಮುಖ್ಯ ಸಂಪಾದಕರನ್ನು ವಶಕ್ಕೆ ತೆಗೆದುಕೊಂಡರು. ಗೋಸ್ವಾಮಿ ಅವರನ್ನು ಪೊಲೀಸರು ಬಲವಂತವಾಗಿ ವಾಹನದೊಳಗೆ ದಬ್ಬಿ ಹಲ್ಲೆ ನಡೆಸಿದೆನ್ನಲಾಗಿದೆ.
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಈ ವರ್ಷ ಮೇ ತಿಂಗಳಿನಲ್ಲಿ ಅನ್ವಯ್ ನಾಯಕ್ ಅವರ ಪುತ್ರಿ ಅದ್ನ್ಯಾ ನಾಯಕ್ ಅವರು ನೀಡಿದ ಹೊಸ ದೂರಿನ ಹಿನ್ನೆಲೆಯಲ್ಲಿ ಈ ಪ್ರಕರಣದ ಮರು ತನಿಖೆಗೆ ಆದೇಶಿದ್ದರು.
ನಮಗೆ ಬಾಕಿ ಬರಬೇಕಾದ ಹಣದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ಬೇಸತ್ತು ನನ್ನ ತಂದೆ ಮತ್ತು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅನ್ವಯ್ ನಾಯಕ್ ಪುತ್ರಿ ಅಲಿಭಾಗ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.