ನವದೆಹಲಿ: ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರು ಆಗಮಿಸಿದ್ದ ಐತಿಹಾಸಿಕ ಜಿ20 ಶೃಂಗಸಭೆ ನಡೆದ ಇಲ್ಲಿನ ಅನುಭವ ಮಂಟಪದೊಳಕ್ಕೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಇದರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಪಕ್ಷಗಳು ಟೀಕಿಸಿವೆ.
ದೆಹಲಿಯಲ್ಲಿ ಸತತ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ. ನಿರಂತರ ಮಳೆಯ ಕಾರಣ, ಭಾರತದ ಅಧ್ಯಕ್ಷತೆಯಲ್ಲಿ ಜಿ 20 ಶೃಂಗಸಭೆ ನಡೆದ ಭಾರತ ಮಂಟಪಕ್ಕೂ ಮಳೆ ನೀರು ನುಗ್ಗಿದೆ. ತಮ್ಮ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡದ್ದಕ್ಕೆ ಮುನಿಸಿಕೊಂಡಿರುವ ಕಾಂಗ್ರೆಸ್ ಇದನ್ನೇ ಬಳಸಿಕೊಂಡು ಟೀಕೆ ನಡೆಸುತ್ತಿದೆ.
ಪಕ್ಷದ ಯುವ ಕಾಂಗ್ರೆಸ್ ಮುಖಂಡ ಶ್ರೀನಿವಾಸ್, ನೀರು ನುಗ್ಗಿದ ಭಾರತ ಮಂಟಪದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ವ್ಯಂಗ್ಯವಾಡಿದ್ದಾರೆ. ‘ವಿಕಾಸ್’ ನಿಜವಾಗಿಯೂ ಪ್ರಗತಿಯನ್ನು ಸಾಧಿಸುತ್ತಿದೆ. ಸರ್ಕಾರದ ಅಭಿವೃದ್ಧಿ ಭರವಸೆಗಳು ಮತ್ತು ಪ್ರಸಿದ್ಧ ಘೋಷಣೆಯಾದ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಇದಾಗಿದೆ ಎಂದು ಹಾಸ್ಯ ಮಾಡಿದ್ದಾರೆ. ಸಭಾಂಗಣಗಳಿಗೆ ನುಗ್ಗಿದ ನೀರನ್ನು ಖಾಲಿ ಮಾಡುತ್ತಿರುವ ಚಿತ್ರಗಳನ್ನೂ ಕಾಂಗ್ರೆಸ್ ಹಂಚಿಕೊಂಡಿದೆ.
ಮಳೆ ನಡುವೆಯೇ ಐತಿಹಾಸಿಕ ಶೃಂಗ: ದೆಹಲಿ ಸೇರಿದಂತೆ ವಿವಿಧೆಡೆ ನಿರಂತರವಾಗಿ ಮಳೆಯಾಗುತ್ತಿದ್ದು, ಇದರ ನಡುವೆಯೇ ಐತಿಹಾಸಿಕ ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಜಾಗತಿಕ ಶೃಂಗಸಭೆಯ ಮೊದಲ ದಿನದ ಬಳಿಕವೂ ಮಳೆ ಕಡಿಮೆಯಾಗಿರಲಿಲ್ಲ. ಇದರ ಪರಿಣಾಮವಾಗಿ ರಾಷ್ಟ್ರ ರಾಜಧಾನಿಯ ವಿವಿಧ ಭಾಗಗಳು ಜಲಾವೃತಗೊಂಡವು. ಶೃಂಗಸಭೆಯ ಕಾರಣದಿಂದಾಗಿ ನಗರದಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನು ಜಾರಿ ಮಾಡಿದ್ದರಿಂದ ಸಂಚಾರ ದಟ್ಟಣೆ ಕಂಡುಬರಲಿಲ್ಲ. ಮಳೆಯು ನಿರಂತರ ಸುರಿಯುತ್ತಿದ್ದರೂ, ಜಾಗತಿಕ ನಾಯಕರು ರಾಜ್ಘಾಟ್ನಲ್ಲಿರುವ ಮಹಾತ್ಮ ಗಾಂಧಿ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.