: ಬೆಳಗಾವಿಯ (Belagavi) ಬೈಲಹೊಂಗಲ ತಾಲೂಕಿನ ಸರ್ಕಾರಿ ವಸತಿ ನಿಲಯದ ಊಟದಲ್ಲಿ ಹುಳುಗಳು ಪತ್ತೆಯಾಗಿವೆ. ತಾಲೂಕಿನ ಎಸ್ಸಿ ಎಸ್ಟಿ (SC, ST) ಪೋಸ್ಟ್ ಮೆಟ್ರಿಕ್ ಬಾಲಕರ ವಸತಿ ನಿಲಯದಲ್ಲಿ (Post-matric SC-ST boys hostel) ನೀಡುವ ಆಹಾರದಲ್ಲಿ ಹುಳುಗಳು ಪತ್ತೆಯಾಗಿವೆ. ಅದಷ್ಟೇ ಅಲ್ಲದೆ ಹಾಸ್ಟೆಲ್ನಲ್ಲಿ ಹಸಿ ರೊಟ್ಟಿ, ಅರೆಬೆಂದ ಇಡ್ಲಿ, ಮಸಾಲೆಗಳಿಲ್ಲದ ಸಾರನ್ನು ನೀಡಲಾಗುತ್ತದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಅರೆ ಬೆಂದ ಹುಳು ಮಿಶ್ರಿತ ಆಹಾರ ಸೇವನೆಯಿಂದ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹಲವು ಬಾರಿ ವಿದ್ಯಾರ್ಥಿಗಳು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಕಳಪೆ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿರುವುದರಿಂದ ಮತ್ತೊಮ್ಮೆ ಸರ್ಕಾರಿ ವಸತಿ ನಿಲಯಗಳ ಗುಣಮುಟ್ಟದ ಕುರಿತು ಪ್ರಶ್ನೆಗಳು ಉದ್ಭವವಾಗಿವೆ. ಇದರ ಕುರಿತು ಹಲವು ಬಾರಿ ವಾರ್ಡನ್ ಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಿದ್ಯಾರ್ಥಿಗಳು ಅದೇ ಕಳಪೆ ಆಹಾರ ಸೇವಿಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.
ಮೂರು ವರ್ಷದ ಹಿಂದೆ ಎರಡು ಕೋಟಿ ವೆಚ್ಚದಲ್ಲಿ ನಿರ್ಮಿಸಿಲಾದ ವಸತಿ ನಿಲಯವು ಸೋರಿಕೆಯಾಗುತ್ತಿದ್ದು, ಕಟ್ಟಡ ಉದ್ಘಾಟನೆಯಾಗಿ ಕೇವಲ ಒಂದೂವರೆ ವರ್ಷದಲ್ಲಿ ಈ ಸ್ಥಿತಿ ಎದುರಾಗಿದೆ. ನೆಲದ ಟೈಲ್ಸ್ಗಳು ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಗ್ರಂಥಾಲಯವೂ ಸೋರಿಕೆಯಾಗುತ್ತಿದೆ. ವಸತಿ ನಿಯಲದ ವ್ಯವಸ್ಥೆಯು ತೀರಾ ಕಳಪೆಯಾಗಿದ್ದು, ವಿದ್ಯಾರ್ಥಿಗಳು ವಾರ್ಡನ್ ಲಕ್ಷ್ಮಣ ಸದಲಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಸತಿ ನಿಲಯದ ಅರಾಜಕತೆಯ ವಿರುದ್ಧ ಹಲವು ಬಾರಿ ಪ್ರಶ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಈ ಕುರಿತು ವಿದ್ಯಾರ್ಥಿಗಳು ತಹಶೀಲ್ದಾರ್ ಕಚೇರಿಗೆ ದೂರು ಸಲ್ಲಿಸಿದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಹಾಸ್ಟೆಲ್ನ ಸಮಸ್ಯೆಗಳು ಮುನ್ನೆಲೆಗೆ ಬಾರದಂತೆ ಬೈಲಹೊಂಗಲದ ಕಾಂಗ್ರೆಸ್ ಶಾಸಕ ಶಿವಾನಂದ್ ಮಹಂತೇಶ ಕೌಜಲಗಿ ತಡೆ ಹಿಡಿದಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.