ವಿಜಯಪುರ: ಕಳೆದ ಮೂರು ವರ್ಷಗಳಿಂದ ಶಾಂತವಾಗಿದ್ದ ಭೀಮಾತೀರದಲ್ಲಿ ಮತ್ತೆ ರಕ್ತಪಾತದ ಕಹಳೆ ಮೊಳಗಿದೆ. ನಿನ್ನೆ ಮಹಾದೇವ ಸಾಹುಕಾರ್ ಭೈರಗೊಂಡ ಹಾಗೂ ಸಹಚರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಐಜಿ ರಾಘವೇಂದ್ರ, ಈ ತನಿಖೆ ನೆನಪಿನಲ್ಲಿ ಉಳಿಯಲಿದೆ ಎಂದು ಹೇಳಿದ್ದಾರೆ.
ಶೂಟೌಟ್ ನಡೆದಿದ್ದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಐಜಿ, ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ದಾಳಿ ನಡೆಸಿದವರ ಗುರುತು ಪತ್ತೆಯಾಗಿದ್ದು, ಅತೀ ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ. ಘಟನೆ ಸಂದರ್ಭದಲ್ಲಿ 15 ರಿಂದ 20 ಜನ ಗುಂಡಿನ ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಇದ್ದು, ದಾಳಿ ಮಾಡಿದವರ ಕಡೆಯಲ್ಲೂ ಇಬ್ಬರಿಗೆ ಗಾಯಗಳಾಗಿವೆ ಎಂಬುದಾಗಿ ತಿಳಿದುಬಂದಿದೆ.
ಪ್ರಾಥಮಿಕ ತನಿಖೆಯ ಮಾಹಿತಿ ಅನ್ವಯ ಆರೋಪಿಗಳು, 23 ರಿಂದ 30 ವರ್ಷದೊಳಗಿನ ವ್ಯಕ್ತಿಗಳಾಗಿದ್ದಾರೆ. ಘಟನಾ ಸ್ಥಳದಲ್ಲಿ 6 ರಿಂದ 7 ವೆಪನ್ ಗಳ ಗುಂಡುಗಳು ಪತ್ತೆಯಾಗಿದೆ. ಸದ್ಯ ಆರೋಪಿಗಳು ಗಾಯಗೊಂಡಿರುವ ಕಾರಣ ವಿಜಯಪುರ, ಮಹಾರಾಷ್ಟ್ರದ ಸೋಲಾಪುರ, ಪುಣೆಗಳಲ್ಲಿ ಆಸ್ಪತ್ರೆಗಳಿಗೆ ಗಾಯಾಳುಗಳ ಮಾಹಿತಿ ಕೇಳಿದ್ದೇವೆ. ನಿನ್ನೆ ಸಂಜೆಯಿಂದ 35 ಕಡೆಗಳಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. 37 ಜನ ಇನ್ಸ್ ಪೆಕ್ಟರ್ ಸೇರಿದಂತೆ ಪೊಲೀಸರು ವಿಜಯಪುರ ಸೇರಿ ನಾನಾ ಗಸ್ತು ನಡೆಸಿದ್ದಾರೆ. ಈ ದಾಳಿಯಲ್ಲಿ ಪಾಲ್ಗೊಂಡ ಎಲ್ಲರನ್ನು ಶೀಘ್ರವೇ ಬಂಧಿಸುತ್ತೇವೆ. ಘಟನಾ ಸ್ಥಳದಲ್ಲಿ ಮಚ್ಚು, ಲಾಂಗ್, ಪೆಟ್ರೋಲ್ ಬಾಂಬ್ ಸೇರಿದಂತೆ 5 ಮೋಟಾರ್ ಸೈಕಲ್, ಟ್ರಕ್ ಅನ್ನು ವಶಕ್ಕೆ ಪಡೆದಿದ್ದೇವೆ ಎಂದರು.
ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳಲ್ಲಿ ಕೆಲ ಸ್ಥಳೀಯರ ಮಾಹಿತಿ ಲಭಿಸಿದೆ. ಅಲ್ಲದೇ ಪುಣೆ, ಉತ್ತರ ಪ್ರದೇಶದ ಜನರೂ ಭಾಗಿಯಾಗಿರುವ ಸಾಧ್ಯತೆಯಿದೆ. ಘಟನೆ ನಡೆದಿರುವುದನ್ನು ಗಮನಿಸಿದರೆ ಪಕ್ಕಾ ಪ್ಲಾನ್ ಮಾಡಿ ದಾಳಿ ಮಾಡಿದ್ದಾರೆ. ಈ ಪ್ರರಕಣದ ತನಿಖೆ ಜನರ ನೆನಪಿನಲ್ಲಿ ಉಳಿಯುತ್ತದೆ. ವಿಜಯಪುರ, ಕಲಬುರಗಿಯಲ್ಲಿ ಸಕ್ರಿಯವಾಗಿರುವ ಗ್ಯಾಂಗ್ಗಳನ್ನು ಮಟ್ಟ ಹಾಕುತ್ತೇವೆ ಎರು.