ಬೆಳಗಾವಿ: ಇಲ್ಲಿನ ಕಪಿಲೇಶ್ವರ ಮಂದಿರದ ಆವರಣದ ಹೊಂಡದಲ್ಲಿ ಬೆಳ್ಳಂ ಬೆಳಗ್ಗೆ ಅಪರಿಚಿತ ಜೋಡಿ ಶವಗಳು ಪತ್ತೆಯಾಗಿರುವ ಘಟನೆ ನಡೆದಿದೆ. ಘಟನೆಯಿಂದ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ.
ಒಂದು ಪುರುಷ ಶವವಾಗಿದ್ದು, ಮತ್ತೊಂದು ಮಹಿಳೆಯದ್ದಾಗಿದೆ. ಬೆಳಗ್ಗೆ ಇಲ್ಲಿ ವಾಕಿಂಗ್ ಮಾಡುತ್ತಿದ್ದ ಸ್ಥಳೀಯರು ಹೊಂಡದಲ್ಲಿ ಎರಡು ಹೆಣಗಳು ತೇಲುತ್ತಿರುವುದನ್ನು ಗಮನಿಸಿ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶವಗಳು ಗುರುತು ಇನ್ನೂ ಪತ್ತೆಯಾಗಿಲ್ಲ.
ಸಾವಿನ ಸುತ್ತ ಅನುಮಾನದ ಹುತ್ತ: ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಶವಗಳನ್ನು ಹೊಂಡದಿಂದ ಮೇಲಕ್ಕೆ ತೆಗೆಯಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಕಪಿಲೇಶ್ವರ ಹೊಂಡದ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ. ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರಾ?, ಇಲ್ಲವೇ ಯಾರಾದರೂ ಕೊಲೆ ಮಾಡಿ ಶವಗಳನ್ನು ಹೊಂಡದಲ್ಲಿ ಬಿಸಾಕಿ ಹೋಗಿದ್ದಾರಾ? ಎಂಬ ಬಗ್ಗೆ ಅನುಮಾನ ಮೂಡಿದೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಯುವತಿಯ ಮೃತದೇಹ ಮನೆ ಮುಂದೆ ಪತ್ತೆ: ನಾಪತ್ತೆಯಾಗಿದ್ದ ಯುವತಿಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಘಟನೆ ಮಹಾದೇವಪುರ ಠಾಣಾ ವ್ಯಾಪ್ತಿಯ ಮಹೇಶ್ವರಿ ನಗರದಲ್ಲಿ ಇತ್ತೀಚೆಗೆ ನಡೆದಿತ್ತು. ಮಹಾನಂದ (21) ಎಂಬಾಕೆಯ ಕತ್ತು ಹಿಸುಕಿ ಹತ್ಯೆ ಮಾಡಲಾಗಿತ್ತು, ಆ.11ರಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಮನೆಯ ಬಳಿಯೇ ಮೃತದೇಹ ಪತ್ತೆಯಾಗಿತ್ತು.
ಕಲಬುರಗಿ ಮೂಲದ ಮಹಾನಂದ ಹಾಗೂ ಆಕೆಯ ಅಕ್ಕ ಕಳೆದ ಮೂರು ವರ್ಷಗಳಿಂದ ಮಹಾದೇವಪುರ ಠಾಣಾ ವ್ಯಾಪ್ತಿಯ ಮಹೇಶ್ವರಿ ಲೇಔಟ್ನಲ್ಲಿ ವಾಸವಿದ್ದು, ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ತಡರಾತ್ರಿ ಮಹಾದೇವಪುರ ಠಾಣೆಗೆ ಬಂದಿದ್ದ ಮಹಾನಂದಳ ಅಕ್ಕ, ತಂಗಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಆದರೆ, ಬೆಳಗ್ಗೆ ಐದು ಗಂಟೆ ಸುಮಾರಿಗೆ ಮನೆ ಮುಂದೆಯೇ ಮಹಾನಂದಳ ಶವ ಪತ್ತೆಯಾಗಿತ್ತು.
ಘಟನಾ ಸ್ಥಳಕ್ಕೆ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಎಸ್.ಗಿರೀಶ್, ಮಹದೇವಪುರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದರು. ಮೇಲ್ನೋಟಕ್ಕೆ ಇದು ಅಸಹಜ ಸಾವು ಎಂಬುದು ತಿಳಿದು ಬಂದಿದೆ. ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ, ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ ಎಂದು ಕಂಡು ಬಂದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದರು.