ರಾಯಚೂರು: ಸಿಂಧನೂರು ತಾಲೂಕಿನ ಬೆಂಗಾಲಿ ಕ್ಯಾಂಪ್-2ರಲ್ಲಿ ಭಾನುವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಪೋಸ್ಟ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ.
ಸಾಮಾಜಿಕ ಜಾಲತಾಣದಲ್ಲಿ ಒಂದು ಗುಂಪು ಧಾರ್ಮಿಕ ವಿಚಾರವಾಗಿ ಪೋಸ್ಟ್ ಮಾಡಿತ್ತು. ಮತ್ತೊಂದು ಕೋಮಿನವರು ಪ್ರಶ್ನಿಸಿದ್ದಾರೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ಉಂಟಾಗಿ ಗಲಾಟೆಯಾಗಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಸಿಂಧನೂರು ಗ್ರಾಮೀಣ ಪೊಲೀಸರು ದೌಡಾಯಿಸಿ ಎರಡು ಗಂಪನ್ನು ಚದುರಿಸಿದ್ದಾರೆ.
ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಮುಂಜಾಗ್ರತ ಕ್ರಮವಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ವಿಚಾರವಾಗಿ ಎಸ್ಪಿ ನಿಖಿಲ್ ಬಿ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವಿಚಾರವಾಗಿ ಗಲಾಟೆಯಾಗಿದೆ. ಘಟನೆಯಲ್ಲಿ ಯಾರಿಗೂ ಏನು ಆಗಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮೈಸೂರಲ್ಲೂ ಇಂತಹದ್ದೇ ಘಟನೆ: ಎರಡು ಗುಂಪುಗಳ ನಡುವಿನ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯವಾಗಿದ್ದ ಘಟನೆ ನರಸೀಪುರ ತಾಲೂಕಿನ ಶ್ರೀರಾಂಪುರ ಬಡಾವಣೆಯಲ್ಲಿ ಜು.10ರಂದು ತಡರಾತ್ರಿ ನಡೆದಿತ್ತು. ನರಸೀಪುರ ಪಟ್ಟಣದ ಶ್ರೀರಾಂಪುರ ಕಾಲೋನಿಯ ವೇಣುಗೋಪಾಲ್ ನಾಯಕ್ (32) ಕೊಲೆಯಾದ ಯುವಕ.
ಶನಿವಾರ ಹನುಮ ಜಯಂತಿ ಆಚರಣೆ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಸ್ಥಳದಲ್ಲಿದ್ದ ಕೆಲವರು ಉಭಯ ಬಣಗಳನ್ನೂ ಸಮಾಧಾನಪಡಿಸಿದ್ದರು. ಇದಾದ ನಂತರ ಮತ್ತೆ ಗಲಾಟೆ ನಡೆದು ಓರ್ವನ ಕೊಲೆ ನಡೆದಿತ್ತು.
ಗೋಮಾಂಸ ಹಾಗೂ ಚರ್ಮಾ ಸಾಗಾಟ ವಿಚಾರಕ್ಕೆ ಗಲಾಟೆ: ಗೋಮಾಂಸ ಹಾಗೂ ಚರ್ಮ ಸಾಗಾಟ ವಿಚಾರಕ್ಕೆ ಸಂಬಂಧಿಸಿದಂತೆ ಜು.1ರಂದು ಜಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ದನದ ಮಾಂಸ ಸಾಗಾಟ ಮಾಡುವಾಗ ಕೆಲ ಸಂಘಟನೆ ಕಾರ್ಯಕರ್ತರು ವಾಹನ ತಡೆದಿದ್ದರು.