ವಾಣಿಜ್ಯನಗರಿ ಹುಬ್ಬಳ್ಳಿಯ ಜೆಸಿ ನಗರದ ಶ್ರೀರಾಮ ಸಿಟಿ ಯೂನಿಯನ್ ಫೈನಾನ್ಸ್ ಕಂಪನಿಯಲ್ಲಿ ಶಾಖಾ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಿವಾಕರ ಜಯರಾಜ ಅವರು, ಗ್ರಾಹಕರು ತುಂಬಿದ 5.47 ಲಕ್ಷವನ್ನು ಸ್ವಂತಕ್ಕೆ ಬಳಸಿಕೊಂಡು ಕಂಪನಿಗೆ ವಂಚನೆ ಮಾಡಿದ ಪ್ರಕರಣ ಶಹರ ಠಾಣೆಯಲ್ಲಿ ದಾಖಲಾಗಿದೆ.
ಅರವಿಂದ ನಗರದ ದಿವಾಕರ ಅವರು ಫೈನಾನ್ಸ್ ಕಂಪನಿಯಲ್ಲಿ ಶಾಖಾ ವ್ಯವಸ್ಥಾಪಕ, ಶಾಖಾ ಹಿರಿಯ ವ್ಯವಸ್ಥಾಪಕ, ವಿಭಾಗೀಯ ವ್ಯವಸ್ಥಾಪಕ ಮತ್ತು ಪ್ರಾದೇಶಿಕ ವ್ಯವಹಾರಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆ ವೇಳೆ ಸಣ್ಣ ಮತ್ತು ಮಧ್ಯಮ ವ್ಯಾಪಾರಕ್ಕೆ, ಬೈಕ್ ಖರೀದಿಗೆ ಹಾಗೂ ವೈಯಕ್ತಿಕ ಸಾಲವೆಂದು ಗ್ರಾಹಕರಿಗೆ ಬ್ಯಾಂಕ್ನಿಂದ ಸಾಲ ನೀಡಿದ್ದರು.
ಸೆಟ್ಲಮೆಂಟ್ (ಒಂದೇ ಬಾರಿ) ಮೂಲಕ 15 ಮಂದಿ ಗ್ರಾಹಕರಿಂದ 7.09 ಲಕ್ಷ ನಗದು ಹಾಗೂ ಫೋನ್ ಮಾಡಿಸಿಕೊಂಡು, 1.61 ಲಕ್ಷ ಬ್ಯಾಂಕ್ ಖಾತೆಗೆ ತುಂಬಿದ್ದರು. ಉಳಿದ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ಗ್ರಾಹಕರಿಗೆ ಕಂಪನಿಯ ಲೆಟರ್ ಹೆಡ್ನಲ್ಲಿ ಸಾಲ ಮರುಪಾವತಿ ಮಾಡಿರುವುದಕ್ಕೆ ಹಿಂಬರಹ ನೀಡಿದ್ದರು. ಅಲ್ಲದೆ, ತನ್ನ ಪತ್ನಿಗೆ 1 ಲಕ್ಷ ವೈಯಕ್ತಿಕ ಸಾಲ ನೀಡಿ ಮರುಪಾವತಿಸದೆ ವಂಚಿಸಿದ್ದಾರೆ ಎಂದು ಕಂಪನಿಯ ಉದ್ಯೋಗಿ ಪ್ರವೀರ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.