ಯಾವುದೇ ಅಧಿಕಾರಿಗಳನ್ನು ಬದಲಿಸುವ ಉದ್ದೇಶ ನಮಗಿಲ್ಲ. ಆದರೆ ಹಿಂದಿನಂತೆ ಇದ್ದರೆ ಆಗುವುದಿಲ್ಲ. ಜನರು ಬಹಳ ನಿರೀಕ್ಷೆ ಇಟ್ಟು ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಸುಳ್ಳು ಹೇಳುತ್ತ ಕಾಲಕಳೆದರೆ ನಡೆಯುವುದಿಲ್ಲ. ನಮ್ಮ ಸ್ಪೀಡ್ ಗೆ ನೀವೂ ಓಡಬೇಕು. ಜಿಲ್ಲಾಧಿಕಾರಿಗಳ ಕೈಗೆ, ಶಾಸಕರ ಕೈಗೆ ಸಿಗದೆ ಓಡಾಡುವವರು ಈಗಲೇ ಹೊರಗೆ ಹೋಗಲು ಸಿದ್ಧತೆ ಮಾಡಿಕೊಳ್ಳಿ”
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿ ಜಿಲ್ಲೆಯ ಅಧಿಕಾರಿಗಳಿಗೆ ನೀಡಿದ ಸ್ಪಷ್ಟ ಸಂದೇಶ ಇದು.
ಮಂಗಳವಾರ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳ ಮೊದಲ ಸಭೆ ನಡೆಸಿದ ಸಚಿವರು ಸಮಗ್ರ ಮಾಹಿತಿ ಪಡೆಯುವ ಪ್ರಯತ್ನ ಮಾಡಿದರು. ಅತ್ಯಂತ ಮೃಧುವಾಗಿಯೇ ಸಭೆ ನಿರ್ವಹಿಸಿದ ಸಚಿವ ದ್ವಯರು ನೇರವಾಗಿ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.
ನಿಮ್ಮನ್ನು ಬದಲಾಯಿಸುವ ಉದ್ದೇಶ ಇಲ್ಲ. ಆದರೆ ಕೆಲಸ ಮಾಡಬೇಕು, ಜನರ ನಿರೀಕ್ಷೆ ಬಹಳ ಇದೆ. ನಮಗೂ ಒತ್ತಡ ಇದೆ. ನಿಜ ಹೇಳಬೇಕು, ಸುಳ್ಳು ಹೇಳಬೇಡಿ, ಒಮ್ಮೆ ಸುಳ್ಳು ಹೇಳಿದರೆ ಮುಚ್ಚಿಕೊಳ್ಳಲು 10 ಸುಳ್ಳು ಹೇಳಬೇಕಾಗುತ್ತದೆ. ನಾವು ಪ್ರತಿ ಇಲಾಖೆ. ಪ್ರತ್ಯೇಕ ಸಭೆ ನಡೆಸುತ್ತೇವೆ. ಒಮ್ಮೆಲೇ ಎಲ್ಲ ಇಲಾಖೆಗಳ ಕೆಡಿಪಿ ಮೀಟಿಂಗ್ ಮಾಡಿ ಮುಗಿಸುವುದಿಲ್ಲ. ನಮಗೆ ಸೂಕ್ತ ಸ್ಪಂದನೆ ಬೇಕು ಎಂದು ಸತೀಶ್ ಹೇಳಿದರು.
ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಸತೀಶ್ ಜಾರಕಿಹೊಳಿ 5ನೇ ಬಾರಿ ಮಂತ್ರಿಯಾಗಿದ್ದಾರೆ. ಅವರಿಗೆ ಆಡಳಿತದ ಸಮಗ್ರ ಅನುಭವವಿದೆ. ಹಾಗಾಗಿ ನಿಮಗೆ ಎಲ್ಲವನ್ನೂ ಹೇಳಿದ್ದಾರೆ. ಜನರು ನಮಗೆ ಆಶಿರ್ವಾದ ಮಾಡಿದ್ದಾರೆ. ಒಳ್ಳೆಯ ಕೆಲಸ ಮಾಡಿ. ಶಾಸಕರ ಕೈಗೆ, ಡಿಸಿ ಕೈಗೆ ಸಿಗದವರು ಹೊರಗೆ ಹೋಗಿಬಿಡಿ. ನಮ್ಮ ಸ್ಪೀಡ್ ಗೆ ಸ್ಪಂದಿಸಿ, ಇಲ್ಲವಾದರೆ ಇಲ್ಲಿಂದ ಹೊರಡಿ ಎಂದು ಸೂಚಿಸಿದರು.
ಪೊಲೀಸರು ದಾಖಲೆಗಳ ಪರಿಶೀಲನೆ ದಿನನಿತ್ಯ ಜನರಿಗೆ ಕಿರುಕುಳ ನೀಡಬೇಡಿ. ಕಾನೂನು ಉಲ್ಲಂಘಿಸುವವರ ಮೇಲೆ ಕ್ರಮ ಕೈಗೊಳ್ಳಿ. ಹೆಲ್ಮೆಟ್ ಹಾಕದವರು, ಮೊಬೈಲ್ ನಲ್ಲಿ ಮಾತನಾಡುತ್ತ ವಾಹನ ಚಲಾಯಿಸುವವರು ಮತ್ತಿತರರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಅಭ್ಯಂತರವಿಲ್ಲ. ಆದರೆ ದಿನವೂ ವಾಹನ ದಾಖಲೆ ಪರಿಶೀಲಿಸುವ ಬದಲು ತಿಂಗಳಲ್ಲಿ 2 ದಿನ ಅಂತಹ ಕೆಲಸ ಮಾಡಿ. ಅನಗತ್ಯ ಕಿರುಕುಳವಾಗದಂತೆ ನೋಡಿಕೊಳ್ಳಿ ಎಂದು ಹೆಬ್ಬಾಳಕರ್ ಸೂಚಿಸಿದರು.