ನವದೆಹಲಿ: ಮರಣದಂಡನೆ ನೀಡುವ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ವಿಧಿಸುವುದರ ಬದಲಾಗಿ ಪರ್ಯಾಯ ಮಾರ್ಗದ ಶೋಧನೆಗಾಗಿ ತಜ್ಞರ ಸಮಿತಿಯನ್ನು ರಚಿಸುವ ಸಲಹೆಯನ್ನು ಪರಿಗಣಿಸಲಾಗಿದೆ.
ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಮಂಗಳವಾರ ತಿಳಿಸಿದೆ.
ದೇಶದಲ್ಲಿ ಮರಣದಂಡನೆಗೆ ಒಳಗಾದ ಅಪರಾಧಿಗಳನ್ನು ಉರುಳು ಹಾಕಿ ಗಲ್ಲಿಗೇರಿಸುವ ವಿಧಾನವಿದೆ. ಇದು ಅತ್ಯಂತ ಕ್ರೂರ ಎಂದು ಸುಪ್ರೀಂಕೋರ್ಟ್ ಈ ಹಿಂದೆ ಅಭಿಪ್ರಾಯಪಟ್ಟಿತ್ತು. ಹೀಗಾಗಿ ಚಾಲ್ತಿಯಲ್ಲಿರುವ ಈ ವಿಧಾನವನ್ನು ಪರಿಶೀಲಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಈ ಬಗ್ಗೆ ಅಧ್ಯಯನಕ್ಕೆ ಸಮಿತಿ ರಚನೆಗೂ ಸೂಚಿಸಿತ್ತು. ಅದನ್ನು ಪರಿಗಣಿಸಿರುವ ಕೇಂದ್ರ ಸಮಿತಿ ರಚನೆ ಮಾಡುವುದಾಗಿ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠದ ಮುಂದೆ, ಕೇಂದ್ರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಸರ್ಕಾರ ತಜ್ಞರ ಸಮಿತಿಯನ್ನು ರಚಿಸುವ ಕುರಿತು ಕೋರ್ಟ್ನ ನೀಡಿದ ಸಲಹೆಯನ್ನು ಪರಿಗಣಿಸುತ್ತಿದೆ. ಈ ಕುರಿತ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಪ್ರಸ್ತಾವಿತ ಸಮಿತಿಗೆ ತಜ್ಞರ ಹೆಸರುಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ತಜ್ಞರ ನೇಮಕದ ಬಳಿಕ ಸಮಸ್ಯೆಯ ಬಗ್ಗೆ ಅಧ್ಯಯನ ನಡೆಸಲು ಸಾಧ್ಯವಾಗುತ್ತದೆ ಎಂದು ಅಟಾರ್ನಿ ಜನರಲ್ ತಿಳಿಸಿದರು. ಇದನ್ನು ಆಲಿಸಿದ ಪೀಠ ಬೇಸಿಗೆ ರಜೆಯ ನಂತರ ಈ ಕುರಿತ ವಿಚಾರಣೆಗೆ ನಿಗದಿತ ದಿನಾಂಕವನ್ನು ನೀಡುತ್ತೇವೆ ಎಂದು ಹೇಳಿತು.
ಸುಪ್ರೀಂ ಕೋರ್ಟ್ ಏನು ಹೇಳಿತ್ತು?: ಮರಣದಂಡನೆಗೆ ನೀಡಲಾಗುವ ಉರುಳು ಶಿಕ್ಷೆಯು ಕಠಿಣವಾಗಿದೆ. ಅಪರಾಧಿ ನೋವಿಲ್ಲದೇ ಸಾಯುವ ವಿಧಾನದ ಬಗ್ಗೆ ಪರಿಶೀಲಿಸಲು ಮಾರ್ಚ್ 21 ರಂದು ನಡೆದ ವಿಚಾರಣೆಯಲ್ಲಿ ಸಲಹೆ ನೀಡಿತ್ತು.