ಬೆಳಗಾವಿ : ಏಪ್ರಿಲ್ 29ರಂದು ಕುಡಚಿ ಮತಕ್ಷೇತ್ರದ ಕೋಳಿಗುಡ್ಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಹಿರಂಗ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆತರುವ ಉದ್ದೇಶದಿಂದ ಹಣ ಹಂಚಿಕೆ ಮಾಡಿದ ಆರೋಪದ ಮೇಲೆ ಸ್ಥಳೀಯ ಶಾಸಕ ಮತ್ತು ಬಿಜೆಪಿ ಅಭ್ಯರ್ಥಿ ಪಿ ರಾಜೀವ್ ಸೇರಿದಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಉದ್ದೇಶದಿಂದ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮ ವ್ಯಾಪ್ತಿಯಲ್ಲಿ ಹಾಲಪ್ಪ ಹಣಮಂತ ಶೇಗುಣಸಿ ಸೇರಿದಂತೆ ಇನ್ನಿತರರು ದುಡ್ಡು ಹಂಚುವ ಜತೆಗೆ ಆಮಿಷ ತೋರುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಹೀಗಾಗಿ ಪ್ರಮುಖ ಆರೋಪಿ ಶಾಸಕ ಪಿ ರಾಜೀವ್ ಹಾಗೂ ಹಾಲಪ್ಪ ಶೇಗುಣಿಸಿ ವಿರುದ್ಧ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ ಹಂಚಿ ರಮೇಶ್ ಜಾರಕಿಹೊಳಿ ಚುನಾವಣೆ ಗೆದ್ದಿದ್ದಾರೆ: ಇನ್ನೊಂದೆಡೆ ರಮೇಶ್ ಜಾರಕಿಹೊಳಿ ಅವರು ಪ್ರತಿ ಚುನಾವಣೆಯಲ್ಲೂ ದುಡ್ಡು ಹಂಚಿಯೇ ಗೆಲುವು ಸಾಧಿಸಿದ್ದಾರೆ. ಈ ಕುರಿತು ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 2018ರಲ್ಲಿ ಪ್ರಕರಣ ದಾಖಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ (ಜನವರಿ 22-2023) ದಾಖಲಾತಿ ಬಿಡುಗಡೆ ಮಾಡಿದ್ದರು.
ಬೆಳಗಾವಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಬೆಳಗಾವಿ ಗ್ರಾಮೀಣ ಭಾಗದ ಸೂಳೇಭಾವಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಚುನಾವಣೆ ವೇಳೆ ರಮೇಶ್ ಜಾರಕಿಹೊಳಿ ಹಣ ಹಂಚುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಆದ್ರೆ, ಇವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಗೋಕಾಕ್ ಮತಕ್ಷೇತ್ರದ ಚುನಾವಣೆ ಸಮಯದಲ್ಲಿ ಮತದಾರರಿಗೆ ಹಣ ಹಂಚಿಯೇ ಅವರು ಗೆಲುವು ಸಾಧಿಸಿದ್ದರು. ಈ ಕುರಿತು ನಮ್ಮ ಬಳಿ ದಾಖಲಾತಿ ಇದೆ ಎಂದು ಅವರು ಹೇಳಿದ್ದರು.
ಕಳೆದ 2018 ರ ಸಾರ್ವತ್ರಿಕ ಚುನಾವಣೆ ವೇಳೆ ಕೊಣ್ಣೂರು ದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿಯೊಬ್ಬರಿಗೂ ಎರಡು ಸಾವಿರ ರೂಪಾಯಿ ಹಣ ಹಂಚಿಕೆ ಮಾಡಿದ ಫೋಟೋಗಳು ಲಭ್ಯವಾಗಿದ್ದವು. ಇದನ್ನು ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಕರಣದ ದಾಖಲು ಮಾಡದಿದ್ದಾಗ, ನಾವು ತಹಶೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿದೆವು. ಆ ಬಳಿಕ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ನಂಬರ್ 138/2018 ಎಂದು ಇದೇ ವೇಳೆ ದಾಖಲಾತಿ ಬಿಡುಗಡೆ ಮಾಡಿದ್ದರು. ಪ್ರಜಾಪ್ರಭುತ್ವದ ಉಳಿವಿಗಾಗಿ ಚುನಾವಣಾ ಅಧಿಕಾರಿಗಳು ಗೋಕಾಕ್ ಮತಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದರು.
ಗೋಕಾಕ್ ಮತಕ್ಷೇತ್ರದಲ್ಲಿ ಪ್ರತಿ ಮನೆಗೆ ಹಣ, ಮದ್ಯ ಹಾಗೂ ಇನ್ನಿತರೆ ವಸ್ತುಗಳನ್ನು ನೀಡುತ್ತಾ ಬಂದಿದ್ದಾರೆ. ನಾನು ಪ್ರತಿ ಮನೆಗೆ ಭೇಟಿ ಕೊಟ್ಟಾಗ ರಮೇಶ್ ಜಾರಕಿಹೊಳಿ ಬೆಂಬಲಿಗರು ಮತದಾರರ ಮನೆಗೆ ಹೋಗಿ ಅಶೋಕ್ ಪೂಜಾರಿ ಜೊತೆ ಹೋದರೆ ಬೇರೆ ಆಗುತ್ತದೆ ಎಂದು ಧಮ್ಕಿ ಹಾಕುತ್ತಾರೆ ಎಂದು ಆರೋಪಿಸಿದ್ದರು.