ಚಿತ್ರದುರ್ಗ: ಹೆದರಿಸಿ, ಬೆದರಿಸಿ ರಾಜಕಾರಣ ಮಾಡೋದು ಕನಕಪುರ ಸ್ಟೈಲ್. ಪ್ರಜಾಪ್ರಭುತ್ವದಲ್ಲಿ ಹೆದರಿಸಿ ರಾಜಕಾರಣ ಮಾಡೋಕಾಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ರಾಷ್ಟ್ರೀಯಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ಚಿತ್ರದುರ್ಗದ ಮುರುಘಾ ಮಠದ ಶರಣರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಸಿ.ಟಿ.ರವಿ, ಅಟ್ರಾಸಿಟಿ ಹಾಕಿಸುವುದು, ಮನೆ ಮೇಲೆ ಕಲ್ಲು ಹೊಡಿಸುವುದು. ನಮ್ಮ ಸಂಸ್ಕೃತಿ ಅಲ್ಲ. ಅದು ಕನಕಪುರದ ಸಂಸ್ಕೃತಿಯಾಗಿದೆ. ಹೀಗಾಗಿ ಕನಕಪುರದ ಸಂಸ್ಕೃತಿಯನ್ನು ರಾಜ್ಯಕ್ಕೆ ವಿಸ್ತರಿಸಲು ಅವಕಾಶ ಕೊಡಲ್ಲವೆಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ ಬಿಎಸ್ವೈ ಸರ್ಕಾರ ಪರ್ಸೆಂಟೇಜ್ ಸರ್ಕಾರ. ಅವರಗೆ ಹಣ ನೀಡದೇ ನಯಾಪೈಸದ ಕೆಲಸ ನಡೆಯಲ್ಲವೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪದ ವಿರುದ್ಧ ಗುಡುಗಿದ ಅವರು, ಸಿದ್ದರಾಮಯ್ಯರಿಂದ ತಮ್ಮ ಸರ್ಕಾರದ ಆಡಳಿತ ನೆನೆದು ಆರೋಪ ಮಾಡಿದ್ದಾರೆ. ಈ ಹಿಂದೆ ಆಡಳಿತ ನಡೆಸಿರುವ ಸಿದ್ದರಾಮಯ್ಯ ಸರ್ಕಾರವೇ ಪರ್ಸೆಂಟೇಜ್ ಸರ್ಕಾರ ಆಗಿತ್ತು ಎಂದು ತಿರುಗೇಟು ನೀಡಿದರು.
ಇಡೀ ಉತ್ತರ ಕರ್ನಾಟಕ ನೀರಲ್ಲಿ ಮುಳುಗಿದೆ. ಆದರೆ ಸಿಎಂ ಬಿಎಸ್ ವೈ ಶಿಕಾರಿಪುರದಲ್ಲಿ ಅರಾಮಾಗಿದ್ದಾರೆಂಬ ಹೆಚ್ಡಿಕೆ ಆರೋಪಕ್ಕೂ ಪ್ರತಿಕ್ರಿಸಿದ ಸಿಟಿ ರವಿಯವರು,
ನಾಳೆ, ನಾಡಿದ್ದು ಸಿಎಂ ಬಿಎಸ್ವೈ ಸೇರಿದಂತೆ ಸಚಿವರು ನೆರೆ ಸಂತ್ರಸ್ತರ ನೆರವಿಗೆ ಹೋಗ್ತಿದ್ದಾರೆ. ಅಲ್ಲದೇ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಅಧಿಕಾರಿಗಳಿಗೆ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ವಲಸಿಗರು ಹಾಗೂ ಮೂಲ ಬಿಜೆಪಿ ಕಾರ್ಯಕರ್ತರ ನಡುವೇ ತಿಕ್ಕಾಟ ಶುರುವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಹಾಗು ಜೆಡಿಎಸ್ ಪಕ್ಷಗಳು ವಿಧಾನ ಪರಿಷತ್ ಮತ್ತು ರಾಜ್ಯಸಭೆ ವ್ಯಾಪರಕ್ಕಿಟ್ಟ ಪಕ್ಷಗಳಾಗಿವೆ. ಕುದುರೆ ಜೂಜುಕೋರರನ್ನು ರಾಜ್ಯದಿಂದ ರಾಜ್ಯಸಭೆಗೆ ಕಳಿಸಿದ್ದು ನೋಡಿದ್ದೇವೆ. ಆದರೆ ಬಿಜೆಪಿಗೆ ಕಾರ್ಯಕರ್ತರು ಮಾಲೀಕರು. ಹೀಗಾಗಿ ಅಶೋಕ್ ಗಸ್ತಿಯಂತಹ ಸಾಮಾನ್ಯ ಕಾರ್ಯಕರ್ತರನ್ನು ಸಹ ರಾಜ್ಯಸಭೆಗೆ ಕಳಿಸಿದ್ದೇವೆಂದು ಸಮರ್ಥಿಸಿಕೊಂಡರು.