ಹುಬ್ಬಳ್ಳಿ: ಬೆಳಗಾವಿ ಹಾಗೂ ಧಾರವಾಡ ಮಧ್ಯೆ ನೇರ ಸಂಪರ್ಕ ಕಲ್ಪಿಸುವ ಬಹುದಿನಗಳ ಕನಸು ನನಸಾಗುವ ಘಳಿಗೆ ಸಮೀಪಿಸಿದ್ದು ಮೊದಲ ಹಂತದಲ್ಲಿ ಕ್ಯಾರಕೊಪ್ಪ-ಮಮ್ಮಿಗಟ್ಟಿ ಮಧ್ಯೆ ಮಾರ್ಗ ನಿರ್ಮಾಣಕ್ಕೆ ನೈರುತ್ಯ ರೈಲ್ವೆ ನಿರ್ಧಾರ ತಳೆದಿದೆ.
2021-22ನೇ ಸಾಲಿನಲ್ಲಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಬಜೆಟ್ನಲ್ಲಿ ಈ ಯೋಜನೆಗೆ 463 ಕೋಟಿ ರೂ. ಘೋಷಿಸಲಾಗಿತ್ತು. ರೈಲ್ವೆ ಇಲಾಖೆ ಕಳೆದ ವರ್ಷ 20 ಕೋಟಿ ಹಾಗೂ ಪ್ರಸಕ್ತ ವರ್ಷ 10 ಕೋಟಿ ರೂ. ಒದಗಿಸುವುದಾಗಿ ಘೋಷಿಸಿದೆ.
ಕ್ಯಾರಕೊಪ್ಪವರೆರೆಗೆ ಹಾಲಿ ಇರುವ ಬ್ರಾಡ್ಗೇಜ್ ಮಾರ್ಗ ಹೊರತುಪಡಿಸಿ ಅಲ್ಲಿಂದ ಮಮ್ಮಿಗಟ್ಟಿವರೆಗೆ 11.70 ಕಿ.ಮೀ. ಇಪಿಸಿ(ಎಂಜಿನಿಯರಿಂಗ್, ಪ್ರೊಕ್ಯುರ್ಮೆಂಟ್ ಮತ್ತು ಕನ್ಸ್ಟ್ರಕ್ಷನ್)ಮಾದರಿಯಲ್ಲಿ ಸುಮಾರು 243.66 ಕೋಟಿ ರೂ. ವೆಚ್ಚದಲ್ಲಿ ಹೊಸ ಮಾರ್ಗ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಟೆಂಡರ್ ಸಹ ಆಹ್ವಾನಿಸಿದ್ದು, ಜೂನ್ 6ಕ್ಕೆ ಬಿಡ್ ತೆರೆಯಲಾಗುತ್ತಿದೆ. ಇಷ್ಟೆಲ್ಲ ಪ್ರಕ್ರಿಯೆಗಳು ಮುಗಿದು ಕಾಮಗಾರಿ ಆರಂಭಗೊಳ್ಳಲು ಇನ್ನೂ ಸುಮಾರು 6 ಅಥವಾ 7 ತಿಂಗಳುಗಳ ಕಾಲಾವಕಾಶ ಅಗತ್ಯವಿದೆ ಎಂದು ನೈರುತ್ಯ ರೈಲ್ವೆ ವಲಯ ಸಾರ್ವಜನಿಕ ಮುಖ್ಯ ಸಂಪರ್ಕ ಅಧಿಕಾರಿ(ಸಿಪಿಆರ್ಒ) ಅನೀಶ್ ಹೆಗಡೆ ಮಾಹಿತಿ ನೀಡಿದ್ದಾರೆ.
ಇನ್ನು 73 ಕಿಮೀ ದೂರದ ಹೊಸ ರೈಲು ಮಾರ್ಗ ನಿರ್ಮಾಣ ಯೋಜನೆಗೆ 828 ಎಕರೆ ಭೂಮಿ ಅಗತ್ಯವಿದ್ದು, ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದೆ. ಧಾರವಾಡ ಲ್ಲಾ ವ್ಯಾಪ್ತಿಯಲ್ಲಿ 256 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಈ ಭೂಮಿಯನ್ನು ಮಾರ್ಚ್ ತಿಂಗಳಲ್ಲಿ ಸರಕಾರ ನೈರುತ್ಯ ರೈಲ್ವೆಗೆ ಹಸ್ತಾಂತರಿಸಲಿದೆ.