ಹುಬ್ಬಳ್ಳಿ: ಭಾರತೀಯ ಸಂಸ್ಕೃತಿ, ಪರಂಪರೆ, ಆಚರಣೆ, ಕಲೆ ಹಾಗೂ ಸಾಂಸ್ಕೃತಿಕ ಸಿರಿವಂತಿಕೆ ಲೋಕದ ಅನಾವರಣ, ವಿವಿಧತೆಯಲ್ಲಿ ಏಕತೆ ಭಾವದ ಯುವಶಕ್ತಿ ಸಂಗಮ, ದೇಶದ ಸಾಂಸ್ಕೃತಿಕ ರಾಯಭಾರಿಗಳಂತಿರುವ ಯುವ ಪ್ರತಿಭೆಗಳ ದಿಗ್ದರ್ಶನಕ್ಕೆ ವೇದಿಕೆಯಾಗಲು ಹಾಗೂ ಪ್ರೀತಿಯ ಆತಿಥ್ಯ ನೀಡಲು ಹುಬ್ಬಳ್ಳಿ-ಧಾರವಾಡ ಮಹಾನಗರ ಸಜ್ಜಾಗಿದೆ.
ರಾಷ್ಟ್ರೀಯ ಯುವಜನೋತ್ಸವ ಸಂಭ್ರಮ ಒಂದು ಕಡೆಯಾದರೆ, ಉತ್ಸವಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವಿಕೆ ಮಹಾನಗರವನ್ನು ಪುಳಕಿತಗೊಳ್ಳುವಂತೆ ಮಾಡಿದೆ. ದೇಶದ ಯುವ ಸಾಂಸ್ಕೃತಿಕ ಜಗತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಮೈದಳೆಯಲಿದ್ದು, ರಾಜ್ಯದ ಎರಡನೇ ಹಾಗೂ ಉತ್ತರ ಕರ್ನಾಟಕದ ಮೊದಲ ರಾಷ್ಟ್ರೀಯ ಯುಜನೋತ್ಸವಕ್ಕಾಗಿ ಹುಬ್ಬಳ್ಳಿ-ಧಾರವಾಡದಲ್ಲಿ ಹಬ್ಬದ ಸಡಗರ ಸೃಷ್ಟಿಯಾಗಿದೆ. ಉತ್ಸವ ಉದ್ಘಾಟನೆಗೆ ಸ್ವತಃ ಪ್ರಧಾನಿ ಮೋದಿ ಪಾಲ್ಗೊಳ್ಳುವಿಕೆ ಸಂಭ್ರಮ-ಸಂತಸ ದುಪ್ಪಟ್ಟುಗೊಳಿಸಿದೆ.
ಅವಳಿ ನಗರದೆಲ್ಲೆಡೆ ಸ್ವಾಗತ ಕೋರುವ ಫ್ಲೆಕ್ಸ್, ಬ್ಯಾನರ್ಗಳು ರಾರಾಜಿಸುತ್ತಿವೆ. ವಿವಿಧ ಪ್ರಮುಖ ವೃತ್ತಗಳು, ಹಲವು ಕಟ್ಟಡಗಳು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿವೆ.
ಜ.12-16ರವರೆಗೆ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವಕ್ಕಾಗಿ ದೇಶ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಾಂಸ್ಕೃತಿಕ ಯುವ ರಾಯಭಾರಿಗಳು ತಂಡಗಳ ರೂಪದಲ್ಲಿ ಅವಳಿನಗರಕ್ಕೆ ಬಂದಿದ್ದು, ಪ್ರತಿಭೆ ಅನಾವರಣಕ್ಕೆ, ನಾಡು, ದೇಶದ ಸಾಂಸ್ಕೃತಿಕ ಹಿರಿಮೆ ಪ್ರದರ್ಶನಕ್ಕೆ ತಾಲೀಮಿನಲ್ಲಿ ತೊಡಗಿದ್ದಾರೆ.
ವೀರಸನ್ಯಾಸಿ ಸ್ವಾಮಿ ವಿವೇಕಾನಂದ ಜನ್ಮದಿನ ಅಂಗವಾಗಿ 1995ರಿಂದ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಇಲಾಖೆಯಿಂದ ಪ್ರತಿ ವರ್ಷ ಜ.12-16ರವರೆಗೆ ರಾಷ್ಟ್ರೀಯ ಏಕತಾ ದಿನವಾಗಿ ಯುವಜನೋತ್ಸವ ಆಯೋಜಿಸುತ್ತ ಬಂದಿದೆ. ಆಯಾ ರಾಜ್ಯಗಳು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಉತ್ಸವ ಕೈಗೊಳ್ಳುತ್ತಿವೆ. 2012ರಲ್ಲಿ ಮಂಗಳೂರಿನಲ್ಲಿ 17ನೇ ರಾಷ್ಟ್ರೀಯ ಯುವಜನೋತ್ಸವ ನಡೆದಿತ್ತು. ಸುಮಾರು 5,000ಕ್ಕೂ ಅಧಿಕ ಯುವ ಪ್ರತಿಭೆಗಳು ಪಾಲ್ಗೊಂಡಿದ್ದವು. ಸುಮಾರು ಒಂದು ದಶಕದ ಬಳಿಕ ಇದೀಗ ಜ.12-16ರವರೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುತ್ತಿದೆ.
ಹುಬ್ಬಳ್ಳಿಯಲ್ಲಿ ಚಾಲನೆ-ಧಾರವಾಡದಲ್ಲಿ ಅನಾವರಣ: 26ನೇ ರಾಷ್ಟ್ರೀಯ ಯುವಜನೋತ್ಸವ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಚಾಲನೆ ಪಡೆಯಲಿದ್ದು, ದೇಶ ಯುವ ಸಾಂಸ್ಕೃತಿಕಲೋಕ ವಿದ್ಯಾನಗರಿ ಧಾರವಾಡದಲ್ಲಿ ಅನಾವರಣಗೊಳ್ಳಲಿದೆ.
ಜ.12ರಂದು ಸಂಜೆ 4 ಗಂಟೆಗೆ ಇಲ್ಲಿನ ರೈಲ್ವೆ ಮೈದಾನದಲ್ಲಿ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಪ್ರತಿ ವರ್ಷದ ರಾಷ್ಟ್ರೀಯ ಯುವಜನೋತ್ಸವ ಒಂದೊಂದು ಧ್ಯೇಯದೊಂದಿಗೆ ಆಚರಣೆಗೊಳ್ಳಲಿದೆ.