ರಾಯಚೂರು: ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾದುದು. ಸಾರ್ವಜನಿಕವಾಗಿ ಎಷ್ಟೇ ಟೀಕೆ ವ್ಯಕ್ತಪಡಿಸಿದರೂ, ಪೊಲೀಸರಿಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ವಿವಿಧ ಸಂದರ್ಭಗಳಲ್ಲಿ ಸೂಕ್ತ ಬಂದೋಬಸ್ತ್ ಮಾಡಿ, ಭದ್ರತೆ ಒದಗಿಸುವ ಕೆಲಸ ಮಾಡುತ್ತಾರೆ.
ಗಣ್ಯ ವ್ಯಕ್ತಿಗಳ ಭೇಟಿ, ಸಮಾವೇಶ, ಗಲಭೆ ಮುಂತಾದ ಸಂದರ್ಭದಲ್ಲಿ ಅಗತ್ಯಕ್ಕನುಗುಣವಾಗಿ ಅಗತ್ಯವಿದ್ದಾಗ ಸೂಕ್ತ ಭದ್ರತೆ ಪೊಲೀಸ್ ಇಲಾಖೆಯಿಂದ ಲಭಿಸುತ್ತದೆ. ಆದರೆ ಇದೀಗ ರಾಯಚೂರಿ ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರೊಬ್ಬರು ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಿ ಸುದ್ದಿಯಾಗಿದ್ದಾರೆ.
ದೇವದುರ್ಗ ವ್ಯಾಪ್ತಿಯಲ್ಲಿನ ರೈತರು ತಮ್ಮ ಜಮೀನಿನಲ್ಲಿ ಹತ್ತಿ ಬೆಳೆಯನ್ನು ಕಟಾವು ಮಾಡುವಾಗ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ರೈತರಿಗೆ ಬಂದೋಬಸ್ತ್ ಮೂಲಕ ಭದ್ರತೆ ನೀಡಬೇಕೆಂದು ದೇವದುರ್ಗ ಜೆಎಂಎಫ್ಸಿ ನ್ಯಾಯಾಲಯ ಆದೇಶ ನೀಡಿದೆ.
1 ಎಕರೆ 26 ಗುಂಟೆ ಹಾಗೂ 1 ಎಕರೆ 14 ಗುಂಟೆ ಇರುವ ಎರಡು ಜಮೀನುಗಳಲ್ಲಿ ರೈತರು ಹತ್ತಿ ಕೃಷಿ ಮಾಡಿದ್ದಾರೆ. ಬೆಳೆ ಸಮೃದ್ಧವಾಗಿ ಬೆಳೆದು ಕೊಯ್ಲಿಗೆ ಬಂದಿದೆ. ಹೀಗಾಗಿ ಮುಂದಿನ 5 ದಿನಗಳ ಕಾಲ ನಡೆಯುವ ಕಟಾವಿನ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ನೀಡಬೇಕು ಎಂದು ದೇವದುರ್ಗ ಪೊಲೀಸ್ ಠಾಣಾಧಿಕಾರಿಗೆ ನೋಟೀಸ್ ಜಾರಿಯಾಗಿದೆ.