ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಎರಡು ರಾಜ್ಯಗಳಲ್ಲಿ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಸಾಕಷ್ಟು ಪ್ರಯೋಗಗಳನ್ನು ನಡೆಸಿತ್ತು. ಆ ಬದಲಾವಣೆಯ ಅಸ್ತ್ರ ಗುಜರಾತ್ ನಲ್ಲಿ ಫಲ ನೀಡಿದರೆ, ಹಿಮಾಚಲದಲ್ಲಿ ತಿರುಗು ಬಾಣವಾಗಿದೆ.
ಹೀಗಾಗಿ ಒಂದು ರಾಜ್ಯಕ್ಕೆ ಅನ್ವಯವಾಗುವ ಬಿಜೆಪಿಯ ಚುನಾವಣಾ ʼಮಾಡೆಲ್ʼ ಇನ್ನೊಂದು ರಾಜ್ಯಕ್ಕೆ ವ್ಯತಿರಿಕ್ತವಾಗುತ್ತದೆ ಎಂಬುದಕ್ಕೆ ಈ ಫಲಿತಾಂಶವೇ ಉದಾಹರಣೆಯಾಗಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿರುವ ಹಂತದಲ್ಲೇ ಕರ್ನಾಟಕ ವಿಧಾನಸಭಾ ಚುನಾವಣೆಗೆ ತಂತ್ರಗಾರಿಕೆ ಸೃಷ್ಟಿಸುವ ತರಾತುರಿಯಲ್ಲಿ ಬಿಜೆಪಿ ಇದೆ.
ಹಾಗಾದರೆ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಮಾಡೆಲ್ ಯಾವುದು ?
ಈ ಪ್ರಶ್ನೆ ಎದುರಾದಾಗಲೆಲ್ಲ ರಾಜ್ಯ ಬಿಜೆಪಿ ನಾಯಕರು ʼಗುಜರಾತ್ ಮಾಡೆಲ್ʼ ಎಂದು ಉತ್ತರಿಸುತ್ತಲೇ ಬಂದಿದ್ದಾರೆ. ಒಂದು ರಾಜ್ಯದಲ್ಲಿ ಆಡಳಿತಾತ್ಮಕ ಸ್ಥಿರತೆ ತರುವುದಕ್ಕೆ ಗುಜರಾತೇ ಮಾದರಿ. ಅದಾಗಬೇಕಾದರೆ ಗುಜರಾತ್ ರೀತಿಯಲ್ಲಿ ಚುನಾವಣಾ ಪರಿಷ್ಕರಣೆಗಳೂ ಕರ್ನಾಟಕದಲ್ಲಿ ಆಗಬೇಕೆಂಬುದು ಸಂಘ-ಪರಿವಾರದ ಹಿರಿಯರ ಜತೆಗೆ ಮೂಲ ಬಿಜೆಪಿ ನಾಯಕರ ಅಂಬೋಣವೂ ಆಗಿದೆ.
ಹೀಗಾಗಿ ರಾಜ್ಯ ವಿಧಾನಸಭೆ ಚುನಾವಣೆಗೆ ಗುಜರಾತ್ ಮಾದರಿ ಅನುಸರಣೆ ಬಗ್ಗೆ ಈಗ ಚರ್ಚೆಯಾಗುತ್ತಿದೆ. ಏಕೆಂದರೆ ಗುಜರಾತ್ ರೀತಿಯಲ್ಲಿ ಕರ್ನಾಟಕದಲ್ಲೂ ಹಳೆಯ ರಾಜಕಾರಣಿಗಳನ್ನು ಮನೆಗೆ ಕಳುಹಿಸಬೇಕೆಂಬ ಆಗ್ರಹ ಈಗ ಬಲವಾಗಿದೆ.
ಒಂದು ರಾಜಕೀಯ ವ್ಯವಸ್ಥೆಯಲ್ಲಿ ಹೊಸ ನೀರು, ಹೊಸ ಆಲೋಚನೆ ಹರಿದು ಬರುತ್ತಲೇ ಇರಬೇಕು. ʼನಿಂತ ನೀರಲ್ಲಿ ಹುಟ್ಟುವುದು ರೋಗ ಹಬ್ಬಿಸುವ ಸೊಳ್ಳೆʼ ಎಂಬುದು ಬಿಜೆಪಿಯ ಒಳಮನೆಯ ಚಿಂತಕರ ವಾದ. ಗುಜರಾತ್ ನಲ್ಲಿ ಈ ಕಾರಣಕ್ಕಾಗಿ 42 ಹಳೆ ನಾಯಕರನ್ನು ಮನೆಗೆ ಕಳುಹಿಸಲಾಗಿದೆ. ಹೊಸದಾಗಿ ಟಿಕೆಟ್ ಪಡೆದವರಲ್ಲಿ 40 ಜನರು ಗೆದ್ದಿದ್ದಾರೆ. ಹೀಗಾಗಿ ಬದಲಾವಣೆಗೆ ಜನ ಮನ್ನಣೆ ನೀಡಿಯೇ ನೀಡುತ್ತಾರೆ ಎಂಬ ಉದಾಹರಣೆ ಸಹಿತ ವಾದ ಮುಂದಿಡುತ್ತಿದ್ದಾರೆ. ಆದರೆ ಇದೇ ವಾದ ಹಿಮಾಚಲದಲ್ಲಿ ಸ್ವಲ್ಪ ಮಟ್ಟಿಗೆ ತಿರುಗುಬಾಣವಾಗಿದೆಯಲ್ಲ ಎಂಬ ವಾದಕ್ಕೆ ಇನ್ನು ಸ್ಪಷ್ಟ ಸಮರ್ಥನೆ ಸಿಕ್ಕಿಲ್ಲ.
ಏಕೆಂದರೆ ಹಿಮಾಚಲ ಪ್ರದೇಶದಲ್ಲಿ ಹಿರಿಯರನ್ನು ಕೈ ಬಿಟ್ಟಿದ್ದಕ್ಕಾಗಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂಬುದು ಎಷ್ಟು ಸತ್ಯವೋ, ಹಿರಿಯರಿಂದ ಗೆಲುವು ಸಿಕ್ಕಿಲ್ಲ ಎಂಬುದು ಕೂಡಾ ಅಷ್ಟೆ ಸತ್ಯ. ಹಾಲಿ ಸರ್ಕಾರದಲ್ಲಿ ಸಚಿವರಾಗಿದ್ದ ಏಳು ಜನ ಹಿರಿಯರು ಈ ಚುನಾವಣೆಯಲ್ಲಿ ಸೋಲನುಭವಿಸಿದರೆ, ಅಷ್ಟೇ ಪ್ರಮಾಣದಲ್ಲಿ ಹೊಸಬರಿಗೆ ಹಿನ್ನಡೆಯಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿಯಾಗಿದ್ದ ಜೈರಾಂ ಠಾಕೂರ್ ಹಾಗೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ನಡುವಿನ ಕೊನೆಯ ಕ್ಷಣದವರೆಗಿನ ಭಿನ್ನಮತವೇ ಅಲ್ಲಿ ಬಿಜೆಪಿ ಸೋಲಿಗೆ ಅಸಲಿ ಕಾರಣವಾಗಿದ್ದು, ಕರ್ನಾಟಕದಲ್ಲೂ ಅದೇ ಸಮಸ್ಯೆ ತಲೆದೋರಬಹುದೇ ಎಂಬ ಚರ್ಚೆ ಪ್ರಾರಂಭವಾಗಿದೆ.
ಕರ್ನಾಟಕದಲ್ಲಿ ಬಂಡಾಯವೆದ್ದು, ಪ್ರತ್ಯೇಕ ಪಕ್ಷ ಸ್ಥಾಪನೆ ಮಾಡಿ ಬಿಜೆಪಿಗೆ ನೇರ ನಷ್ಟವುಂಟು ಮಾಡುವ ಸಾಮರ್ಥ್ಯವೇನಾದರೂ ಇದ್ದರೆ ಅದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾತ್ರ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅವರು ಪಕ್ಷದಿಂದ ಸಿಡಿದು ಹೋಗುವ ಸ್ಥಿತಿಯಲ್ಲಂತೂ ಇಲ್ಲ.
ಹಾಗೆಂದು ಬಿಜೆಪಿ ವರಿಷ್ಠರ ಎಲ್ಲ ನಿರ್ಧಾರಗಳ ಬಗ್ಗೆ ಅವರು ಸಮಾಧಾನವನ್ನೂ ಹೊಂದಿಲ್ಲ. ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜೊತೆಗಂತೂ ಅವರು ಇತ್ತೀಚೆಗೆ ಅಂತರವನ್ನೇ ಕಾಯ್ದುಕೊಳ್ಳುತ್ತಿದ್ದಾರೆ. ತಮ್ಮ ವಿರುದ್ಧ ಮಾತನಾಡುವ ಸ್ವಪಕ್ಷೀಯರ ವಿರುದ್ಧ ಹೈಕಮಾಂಡ್ ಜಾಣ ಮೌನ ವಹಿಸಿರುವುದು ಯಡಿಯೂರಪ್ಪನವರಿಗೆ ಸುತಾರಾಂ ಇಷ್ಟವಿಲ್ಲ.