ಬೆಂಗಳೂರು: ಚಹಾ ಹಾಗೂ ಸಿಗರೇಟ್ ಕೊಡುವ ವಿಚಾರದಲ್ಲಿ ಕುಂದಲಹಳ್ಳಿ ಗೇಟ್ ಬಳಿಯ ಬೇಕರಿ ಸಿಬಂದಿಗೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪಕ್ಕದ ಅಂಗಡಿಯ ಮಾಲಕನೇ ತನ್ನ ಸಹಚರರ ಮೂಲಕ ಕೃತ್ಯ ಎಸಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.
ಪ್ರಕರಣದ ಸಂಬಂಧ ನಾಲ್ವರನ್ನು ಎಚ್ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೃತ್ಯ ನಡೆದ ಬೇಕರಿಯ ಪಕ್ಕದ ಅಂಗಡಿಯ ಮಾಲಕ ಮಂಜುನಾಥ್, ಡೆಲಿವರಿ ಬಾಯ್ ಅಶ್ವತ್ಥ ನಗರದ ಕಾರ್ತಿಕ್, ಅಲ್ಯೂಮಿನಿಯಂ ಕೆಲಸ ಮಾಡುತ್ತಿದ್ದ ಸಲ್ಮಾನ್, ಖಾಸಗಿ ಹೊಟೇಲ್ ಮ್ಯಾನೇಜರ್ ಆಗಿದ್ದ ಮಾರತ್ತಹಳ್ಳಿಯ ಕಾರ್ತಿಕ್ ಬಂಧಿತರು. ಪ್ರಮುಖ ಆರೋಪಿ ಮಂಜು ತಲೆಮರೆಸಿಕೊಂಡಿದ್ದಾನೆ.
ಉಡುಪಿ ಜಿಲ್ಲೆಯ ಬೈಂದೂರು ಮೂಲದ ನವೀನ್ ಕುಮಾರ್, ಪ್ರಜ್ವಲ್ ಹಾಗೂ ನಿತಿನ್ ಹಲ್ಲೆಗೊಳಗಾದವರು.
ಸಿಸಿ ಕೆಮರಾದಲ್ಲಿ ಸೆರೆಯಾದ ದೃಶ್ಯದ ಆಧಾರದಲ್ಲಿ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪಕ್ಕದ ಅಂಗಡಿ ಮಾಲಕ ಮಂಜುನಾಥನೇ ಕೃತ್ಯದ ರೂವಾರಿ ಎಂಬ ಸಂಗತಿ ಬಯಲಾಗಿದೆ.
ಬೇಕರಿ ಇರುವ ಕಾರಣ ಮಂಜುನಾಥನ ಚಹಾದ ಅಂಗಡಿಯಲ್ಲಿ ವ್ಯಾಪಾರ ಕಡಿಮೆಯಾಗುತ್ತಿತ್ತು. ಈ ಬಗ್ಗೆ ತನ್ನ ಗೆಳೆಯರಿಗೆ ಹೇಳಿಕೊಂಡಿದ್ದು, ಬೇಕರಿಯವರನ್ನು ಹೇಗಾದರೂ ಮಾಡಿ ಓಡಿಸಬೇಕು ಎಂದು ಹಣದ ಆಮಿಷವೊಡ್ಡಿ ಅವರ ಸಹಕಾರ ಕೇಳಿದ್ದ. ಇದಕ್ಕೆ ಒಪ್ಪಿದ್ದ ಆರೋಪಿಗಳು ಗುರುವಾರ ರಾತ್ರಿ ಬೇಕರಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಹಲ್ಲೆ ಮಾಡಿದ್ದರು.
ಮನಬಂದಂತೆ ಹಲ್ಲೆ
ಆರೋಪಿಗಳು ಹೆಲ್ಮೆಟ್ ಹಾಗೂ ಕೈಯಿಂದ ಮನ ಬಂದಂತೆ ಹಲ್ಲೆ ನಡೆಸಿದ್ದಲ್ಲದೆ ಕಾಲಿನಿಂದ ತುಳಿದಿದ್ದಾರೆ. ಬೇಕರಿ ಸಿಬಂದಿಯ ಕುತ್ತಿಗೆಯಲ್ಲಿದ್ದ 18 ಗ್ರಾಂ ತೂಕದ ಸರ ಕಸಿದುಕೊಂಡು ಹೋಗಿದ್ದಾರೆ. ಕಾಂಡಿಮೆಂಟ್ಸ್ ವಸ್ತುಗಳನ್ನು ಹಾಗೂ ಗ್ಲಾಸ್ಗಳನ್ನು ಒಡೆದು ಚೆಲ್ಲಾಪಿಲ್ಲಿ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ನವೀನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.