12ನೇ ಶತಮಾನದ ಶ್ರೇಷ್ಠ ವಚನಕಾರ್ತಿ, ಜಗದ ಅಕ್ಕ ಅಕ್ಕಮಹಾದೇವಿ ಅವರ ಜೀವನ ಇಡೀ ಮಹಿಳಾ ಸಂಕುಲಕ್ಕೆ ಬಹಳ ದೊಡ್ಡ ಆದರ್ಶ ಎಂದು ಗದಗ-ಡಂಬಳದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ತಮ್ಮ ಅಭಿಮತ ವ್ಯಕ್ತಪಡಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಬೆಳಗಾವಿ ಜಿಲ್ಲಾ ಪ್ರಥಮ ಕದಳಿ ಮಹಿಳಾ ಸಮಾವೇಶವನ್ನು ನಗರದ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದ ಶ್ರೀಮತಿ ಪದ್ಮಾವತಿ ಅಂಗಡಿ ವೇದಿಕೆ, ಶರಣೆ ರವಿದೇವಿ-ಸುಗ್ಗಲಾದೇವಿ ಮಂಟಪದಲ್ಲಿ ಗುರುವಾರ ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕ್ರಮವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ನ ಗೌರವ ಸಲಹೆಗಾರರಾದ ಡಾ.ಗೊ.ರು.ಚನ್ನಬಸಪ್ಪ ಅವರು ಉದ್ಘಾಟಿಸಿದರು. ಆರಂಭದಲ್ಲಿ ವಿಶ್ವಗುರು ಬಸವೇಶ್ವರರು ಮತ್ತು ಅಕ್ಕಮಹಾದೇವಿ ಅವರ ಭಾವಚಿತ್ರಗಳಿಗೆ ಸ್ವಾಮೀಜಿಗಳು, ಗಣ್ಯರು ಪೂಜೆ ಸಲ್ಲಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಸುತ್ತೂರಿನ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಗದಗ-ಡಂಬಳದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಿದ್ದರು.
ನಂತರ ಮಾತನಾಡಿದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಕದಳಿ ಎಂಬ ಶಬ್ದ ಬಹಳ ಭಾವಪೂರ್ಣವಾದ ಶಬ್ದ. ಇತ್ತಿಚಿಗೆ ಈ ತಿಂಗಳ ಲಿಂಗಾಯತ ದರ್ಶನ ಪತ್ರಿಕೆಯಲ್ಲಿ ಡಾ.ಸಿದ್ದಣ್ಣ ಅವರು ಕದಳಿ ಶಬ್ದದ ಬಗ್ಗೆ ಬಹಳ ಒಳ್ಳೆಯ ವಿಶ್ಲೇಷಣೆ ಬರೆದಿದ್ದಾರೆ. ನಮ್ಮ ಬಸವಾದಿ ಶರಣರು ಕದಳಿ ಎಂಬ ಶಬ್ದವನ್ನು ಬಹಳಷ್ಟು ಅರ್ಥಗಳಲ್ಲಿ ಬಳಸಿದ್ದಾರೆ. ಸಾಮಾನ್ಯವಾಗಿ ಕದಳಿ ಎಂದರೆ ಬಾಳೆ.
ಆದರೆ ಕದಳಿಯನ್ನು ಆಧ್ಯಾತ್ಮಿಕ ಪಾರಿಭಾಷಿಕ ಶಬ್ದವಾಗಿ ಬಳಸಿರುವುದು ಶರಣರ ಹೆಗ್ಗಳಿಕೆಯಾಗಿದೆ. ಕದಳಿ ಎಂಬುದು ತನು, ಕದಳಿ ಎಂಬುದು ಮನ, ಕದಳಿ ಎಂಬುದು ವಿಷಯಂಗಳು, ಕದಳಿ ಎಂಬುದು ಭವಘೋರಾರಣ್ಯ, ಈ ಕದಳಿ ಎಂಬುದ ಗೆದ್ದುತವೆ ಬದುಕಿಬಂದು ಕದಳಿಯ ಬನದಲ್ಲಿ ಭವಹರನ ಕಂಡೆನು, ಭವಗೆದ್ದು ಬಂದ ಮಗಳೆ ಎಂದು ಕರುಣದಿ ತೆಗೆದು ಬಿಗಿದಪ್ಪಿದಡೆ ಚನ್ನಮಲ್ಲಿಕಾರ್ಜುನನ ಹೃದಯ ಕಮಲದಲ್ಲಿ ಅಡಗಿದೆನು ಎಂದು ಅಕ್ಕಮಹಾದೇವಿ ಅವರು ತಮ್ಮ ವಚನದಲ್ಲಿ ಕದಳಿಯನ್ನು ಬಹಳ ವಿಶೇಷವಾಗಿ ಬಳಿಸಿದ್ದಾರೆ ಎಂದು ವಿವರಿಸಿದರು.