ಬಾಗಲಕೋಟೆ: ಕಬ್ಬು ಬೆಲೆ ನಿಗದಿ ವಿಚಾರವಾಗಿ ಬಾಗಲಕೋಟೆಯ ಸಕ್ಕರೆ ಕಾರ್ಖಾನೆಯ ಬಳಿ ನಡೆಯುತ್ತಿರುವ ಪ್ರತಿಭಟನೆ ವಿಕೋಪಕ್ಕೆ ತೆರಳಿದ್ದು, ಕಲ್ಲು ತೂರಾಟವೂ ನಡೆದಿದೆ. ಮಾತ್ರವಲ್ಲ, ಇನ್ಸ್ಪೆಕ್ಟರ್ ಸೇರಿ ಮೂವರು ಪೊಲೀಸರಿಗೆ ಗಾಯವಾಗಿದೆ.
ಬಾಗಲಕೋಟೆಯ ಸಮೀರವಾಡಿ ಸಕ್ಕರೆ ಕಾರ್ಖಾನೆ ಎದುರು ಕಬ್ಬು ಬೆಲೆ ನಿಗದಿ ವಿಚಾರವಾಗಿ ರೈತರ ಪ್ರತಿಭಟನೆ ನಡೆಸುತ್ತಿದ್ದು, ಅದು ಇದೀಗ ವಿಕೋಪಕ್ಕೂ ತಿರುಗಿದೆ. ಪ್ರತಿಭಟನಾಕಾರರು ಎಸೆದ ಕಲ್ಲು ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಎದೆಗೇ ಬಿದ್ದಿದ್ದು, ಅವರೂ ಸೇರಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ.
ರಬಕವಿ-ಬನಹಟ್ಟಿಯ ಮಠಪತಿ ಗಾಯಗೊಂಡಿರುವ ಇನ್ಸ್ಪೆಕ್ಟರ್, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಬಾಗಲಕೋಟೆ ಎಸ್ಪಿ ಜಯಪ್ರಕಾಶ್ ಧಾವಿಸಿದ್ದಾರೆ.
ಕಲ್ಲು ತೂರಾಟ ಹಾಗೂ ಕಬ್ಬು ಬೆಳೆಗಾರರ ಗದ್ದಲದಲ್ಲಿ ಕಾರ್ಖಾನೆಯ ಅನೇಕ ವಸ್ತುಗಳು ಜಖಂಗೊಂಡಿಗೆ. ಕಾರ್ಖಾನೆ ಗೇಟ್, ಬಾಗಿಲು, ಕಿಟಕಿ, ಗಾಜುಗಳು ಹಾನಿಗೀಡಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇನ್ನೊಂದೆಡೆ ಕಾರ್ಖಾನೆಯವರು ಪ್ರತಿ ಟನ್ಗೆ 2,900 ಬೆಲೆ ಘೋಷಣೆ ಮಾಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಗಿದೆ.