ಉಡುಪಿ: ಪ್ರಧಾನ ನರೇಂದ್ರ ಮೋದಿ ಅವರ ಮುಂದೆ ರಾಹುಲ್ ಗಾಂಧಿ ಬಚ್ಚಾ. ರಾಹುಲ್ ಹೋದಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೇವಡಿ ಮಾಡಿದರು.
ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಸೋಮವಾರ ಹಮ್ಮಿಕೊಂಡ ‘ಜನಸಂಕಲ್ಪ ಸಮಾವೇಶ’ದಲ್ಲಿ ಮಾತನಾಡಿದ ಯಡಿಯೂರಪ್ಪ, ಕಾಂಗ್ರೆಸ್ನ ಕೆಲ ನಾಯಕರು ಸಿಎಂ ಆಗುವ ಭ್ರಮೆಯಲ್ಲಿದ್ದಾರೆ.
ಅವರಿಗೆ ವಾಸ್ತವ ಸಂಗತಿ ತಿಳಿಸಲಿದ್ದೇವೆ. ಮೋದಿ ಟೀಕಿಸುವ ನೈತಿಕತೆ ಅವರಿಗೆ ಇಲ್ಲ. ರಾಹುಲ್ ಹೋದಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದರು.
ಮೋದಿ ಪ್ರಧಾನಿಯಾಗಿ 8 ವರ್ಷಗಳಲ್ಲಿ ಒಂದು ದಿನವೂ ವಿಶ್ರಾಂತಿ ತೆಗೆದುಕೊಂಡಿಲ್ಲ. ದೇಶದ ರಥ ಮುಂದೆ ಸಾಗಬೇಕಾದರೆ ಪಕ್ಷ ಬಲವರ್ಧನೆ ಅಗತ್ಯ. ಹೀಗಾಗಿ ಚಾಮರಾಜನಗರದಿಂದ ತಾನು ಹಾಗೂ ಉತ್ತರ ಕರ್ನಾಟಕದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರವಾಸ ಹೊರಡಲಿದ್ದೇವೆ. ಈ ಸಂದರ್ಭ ರಾಜ್ಯ ರಾಜಕೀಯದ ಸ್ಪಷ್ಟ ಚಿತ್ರಣ ಸಿಗಲಿದೆ. 140ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಮೋದಿಯವರಿಗೆ ಗೌರವ ತಂದುಕೊಡುತ್ತೇವೆ. ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 10 ಲಕ್ಷ ಕೋಟಿ ರೂ. ಬಂಡವಾಳ ಹರಿದು ಬಂದಿರುವುದು ರಾಜ್ಯದ ಪ್ರಗತಿಗೆ ಸಾಕ್ಷಿ ಎಂದರು.