ಕರ್ನಾಟಕ ರಾಜ್ಯೋತ್ಸವಕ್ಕೆ ಕುಂದಾನಗರಿ ಬೆಳಗಾವಿಯಲ್ಲಿ ಭರದ ಸಿದ್ಧತೆ ನಡೆದಿದೆ. ಬೆಳಗಾವಿಯಲ್ಲಿ ರಾಜ್ಯೋತ್ಸವ ಜೊತೆಗೆ ನೆನಪಾಗೋದು ಹಿರೇಮಠದ ಹೋಳಿಗೆ ಊಟ. ಈ ವರ್ಷವೂ ಕನ್ನಡಮ್ಮನ ಜಾತ್ರೆಗೆ ಬರುವ ಕನ್ನಡಮ್ಮನ ಕಂದಮ್ಮಗಳಿಗೆ ಭರ್ಜರಿ ಹೋಳಿಗೆ ಊಟ ಸಿದ್ಧಗೊಳ್ಳುತ್ತಿದೆ.
ಹೌದು ಹೌದು ಕರ್ನಾಟಕ ರಾಜ್ಯೋತ್ಸವದ ದಿನ ತಾಯಿ ಭುವನೇಶ್ವರಿಯ ತೇರು ಎಳೆಯಲು ಲಕ್ಷಾಂತರ ಕನ್ನಡಿಗರ ಸಮಾಗಮ ಬೆಳಗಾವಿಯಲ್ಲಿ ಆಗುತ್ತದೆ. ನಾಡಿನ ಮೂಲೆ ಮೂಲೆಯಿಂದ ಕನ್ನಡಿಗರು ಬೆಳಗಾವಿಗೆ ಬರುತ್ತಾರೆ. ಹೀಗೆ ಬರುವ ಕನ್ನಡಿಗರಿಗೆ ಹುಕ್ಕೇರಿಯ ಹಿರೇಮಠದ ಡಾ.ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಮಠದ ವತಿಯಿಂದ ಹೋಳಿಗೆ ಊಟದ ವ್ಯವಸ್ಥೆಯನ್ನು ಅನೇಕ ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಈ ವರ್ಷವೂ ಕೂಡ ಹೋಳಿಗೆ ಊಟಕ್ಕೆ ಎಲ್ಲ ಸಿದ್ಧತೆ ಆರಂಭವಾಗಿದೆ. ನಗರದ ಸರ್ದಾರ್ ಮೈದಾನದಲ್ಲಿ ಹೋಳಿಗೆ ಊಟದ ವ್ಯವಸ್ಥೆಯನ್ನ ಮಾಡಲಾಗಿದೆ. 150 ಜನ ಹೆಣ್ಣು ಮಕ್ಕಳು ಹೋಳಿಗೆ ಸಿದ್ಧತೆಗೆ ಆಗಮಿಸಲಿದ್ದಾರೆ 50, ಜನ ಪುರುಷರು ಅನ್ನ ಸಾಂಬಾರ ಮತ್ತು ಇತರೆ ಆಹಾರವನ್ನು ತಯಾರಿಸಲಿದ್ದಾರೆ ಕನ್ನಡಿಗರು ಹಸಿದಾಗ ಶ್ರೀ ಮಠ ಅವರನ್ನ ಸಂತೈಸಿ ಬೇಕು ಎಂದುಕೊಂಡು ಈ ಕಾರ್ಯವನ್ನ ಹಲವಾರು ವರ್ಷಗಳಿಂದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾಡುತ್ತಿದ್ದಾರೆ.
50,000 ಜನರಿಗೆ 2 ಹೋಳಿಗೆ ಅನ್ನ ಸಾರು ನಿಡಲಾಗುವುದು ಅಂದರೆ ಒಂದು ಲಕ್ಷ ಹೋಳಿಗೆ ತಯಾರಿಸಲು ಸಿಬ್ಬಂದಿ ತಯಾರಾಗಿದೆ ಈ ಹೋಳಿಗೆ ಊಟವನ್ನ ಉದ್ಘಾಟಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಆಗಮಿಸಲಿದ್ದಾರೆ ಖ್ಯಾತ ಚಲನಚಿತ್ರ ನಟ ಸಾಯಿಕುಮಾರ ಅವರು ಹೋಳಿಗೆ ಊಟದಲ್ಲಿ ಭಾಗಿಯಾಗಿ ಉತ್ತರ ಕರ್ನಾಟಕದ ಹೋಳಿಗೆ ಊಟವನ್ನ ಸವಿಯಲಿದ್ದಾರೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿ ಎಲ್ಲ ಅಧಿಕಾರಿ ವರ್ಗ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. ಹೀಗಾಗಿ ಬನ್ನಿ ಈ ಹೋಳಿಗೆ ಊಟವನ್ನ ಸವಿಯೋಣ ನಿತ್ಯ ಕನ್ನಡವನ್ನು ಮಾತನಾಡೋಣ, ಕನ್ನಡಿಗರಾಗಿ ಬದುಕೋಣ ಎಂದು ಸ್ವಾಮೀಜಿ ಕರೆ ನೀಡಿದ್ದಾರೆ.