ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದ್ದು. ಒತ್ತುವಾರಿಯಾಗಿದ್ದ ಗಣೇಶ ಮಂದಿರ ಮುಂಭಾಗದ ತಗಡಿನ ಶೆಡ್ ತೆರವಿಗೆ ದಕ್ಷಿಣ ಶಾಸಕ ಅಭಯ್ ಪಾಟೀಲ್ರ ಮನವಲಿಕೆ ಹಿನ್ನೆಲೆ ದೇವಸ್ಥಾನ ಮಂಡಳಿಯವರು ಒಪ್ಪಿಗೆ ಸೂಚಿಸಿದರು.
: ಹೌದು ಬೆಳಗಾವಿಯ ಬಸವೇಶ್ವರ ವೃತ್ತದ ಬಳಿಯ ಗಣೇಶ ದೇವಸ್ಥಾನ ಎದುರು ಹಾಕಲಾಗಿದ್ದ ತಗಡಿನ ಶೆಡ್ನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಬುಧವಾರ ರಾತ್ರಿ ತೆರವು ಮಾಡಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಇವರನ್ನು ನಗರಸೇವಕರಾದ ಗಿರೀಶ್ ಧೋಂಗಡಿ, ನಿತಿನ್ ಜಾಧವ್ ಮತ್ತು ಪಾಲಿಕೆ ಸಿಬ್ಬಂದಿ ಮನವಲಿಸಿದರು.
ಶಾಸಕ ಅಭಯ್ ಪಾಟೀಲ್ ಜೊತೆ ದೂರವಾಣಿಯಲ್ಲಿ ಮಾತನಾಡಿಸಿ ಮನವೊಲಿಕೆ ಮಾಡಲಾಗಿದೆ. ದೇವಸ್ಥಾನ ಕಟ್ಟಡಕ್ಕೆ ಯಾವುದೇ ರೀತಿ ಹಾನಿಯಾಗದೇ ಶೆಡ್ ತೆರವಿನ ಭರವಸೆ ಹಿನ್ನೆಲೆ ದೇವಸ್ಥಾನ ಎದುರುಗಿನ ಶೆಡ್ ತೆರವಿಗೆ ದೇವಸ್ಥಾನ ಆಡಳಿತ ಮಂಡಳಿ ಸಮ್ಮತಿ ಸೂಚಿಸಿತು. ನಂತರ ದೇವಸ್ಥಾನ ಮಂಡಳಿಯವರು ತಾವೇ ಸ್ವತಃ ತಗಡಿನ ಶೆಡ್ನ್ನು ತೆಗೆಯಲು ಮುಂದಾದರು.
ಬಸವೇಶ್ವರ ವೃತ್ತದ ಬಳಿ ಸರ್ವೇ ನಂಬರ್ 2026ರಲ್ಲಿ ಆಗಿದ್ದ ಒತ್ತುವರಿ ತೆರವು ಮಾಡಲಾಗಿದೆ. ಮೊದಲು ಮುಸ್ಲಿಂ ಸಮುದಾಯದ ಮನೆಗಳ ತೆರವು ಮಾಡಿದ್ದರು. ಇನ್ನು ಗಣೇಶ ದೇವಸ್ಥಾನ ಎದುರು ಸುಮಾರು ಹತ್ತು ಅಡಿ ಜಾಗ ಸಹ ಒತ್ತುವರಿ ಆಗಿತ್ತು. ಸುಮಾರು ಹತ್ತು ಅಡಿ ಜಾಗದಲ್ಲಿ ದೇವಸ್ಥಾನ ಆಡಳಿತ ಮಂಡಳಿ ತಗಡಿನ ಶೀಟ್ ಅಳವಡಿಸಿತ್ತು. ದೇವಸ್ಥಾನ ಎದುರು ನಿರ್ಮಿಸಲಾಗಿದ್ದ ಶೆಡ್ ತೆರವಿಗೆ ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ್ ವಿರೋಧ ವ್ಯಕ್ತಪಡಿಸಿದ್ದರು. ಒಂದೆಡೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಮತ್ತೊಂದೆಡೆ ಮುಸ್ಲಿಂ ಸಮುದಾಯದ ಜನ ಜಮಾವಣೆಗೊಂಡಿದ್ರು. ಈ ಹಿನ್ನೆಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣ ಆಗಿತ್ತು.