ಮುಂಬರುವ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿ. ಆದರೆ ಡಾಲ್ಬಿಯನ್ನು ಉಪಯೋಗ ಮಾಡಬೇಡಿ ಎಂದು ಡಿಸಿಪಿ ರವೀಂದ್ರ ಗಡಾದಿ ಅವರು ಕನ್ನಡ ಸಂಘಟನೆಗಳಿಗೆ ಮನವಿ ಮಾಡಿಕೊಂಡರು.
ಇಡೀ ರಾಜ್ಯದಲ್ಲಿಯೇ ನವೆಂಬರ್ 1ರಂದು ಬೆಳಗಾವಿಯಲ್ಲಿ ಅದ್ಧೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಅಂದು ಬೆಳಗಾವಿಗೆ ರಾಜ್ಯದ ನಾನಾ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ರಾಣಿ ಚನ್ನಮ್ಮಾಜಿ ವೃತ್ತದಲ್ಲಿ ಲಕ್ಷೋಪಲಕ್ಷ ಕನ್ನಡಿಗರು ಜಮಾಯಿಸಿ ಕನ್ನಡಮ್ಮನ ಜಾತ್ರೆಯಲ್ಲಿ ಮಿಂದೇಳುತ್ತಾರೆ. ಇನ್ನು ಅದ್ಧೂರಿ ರಾಜ್ಯೋತ್ಸವಕ್ಕೆ ಕ್ಷಣಗಣನೇ ಕೂಡ ಶುರುವಾಗಿದೆ. ಹೀಗಾಗಿ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆ ಮಾರ್ಕೆಟ್ ಪೊಲೀಸ್ ಠಾಣೆಯ ಎಸಿಪಿ ಕಚೇರಿ ಆವರಣದಲ್ಲಿ ಕನ್ನಡ ಸಂಘಟನೆಗಳ ಮುಖಂಡರ ಜೊತೆಗೆ ಡಿಸಿಪಿ ರವೀಂದ್ರ ಗಡಾದಿ ಸಭೆ ಮಾಡಿದರು.
ಸಭೆಯಲ್ಲಿ ಮಾತನಾಡಿದ ಕನ್ನಡ ಹೋರಾಟಗಾರರು ಈ ಬಾರಿ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲು ಅವಕಾಶ ಮಾಡಿಕೊಡಿ.
ಕಳೆದ ಎರಡು ವರ್ಷ ಕೊರೊನಾ ಹಿನ್ನೆಲೆ ಅದ್ಧೂರಿಯಾಗಿ ಆಚರಿಸಲು ಆಗಲು ಸಾಧ್ಯವಾಗಿಲ್ಲ. ಸಾವಿರಾರು ಯುವಕರು ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಹೀಗಾಗಿ ಡಾಲ್ಬಿ ಹಚ್ಚಲು ಅವಕಾಶ ಮಾಡಿಕೊಡಿ, ಇದರ ಜೊತೆಗೆ ಅನೇಕ ಕಾರ್ಯಕ್ರಮಗಳನ್ನು ನಗರದ ವಿವಿಧ ಕಡೆ ಆಯೋಜನೆ ಮಾಡಲಾಗಿದೆ. ನವೆಂಬರ್ 1ರಂದು ತಮ್ಮ ತಮ್ಮ ಪ್ರದೇಶಗಳಿಂದ ಭವ್ಯ ಮೆರವಣಿಗೆಯಲ್ಲಿ ಭಾಗಿಯಾಗುತ್ತಾರೆ. ಅದೇ ರೀತಿ ಅನೇಕ ಸಂಘಟನೆಗಳು ಚನ್ನಮ್ಮಾಜಿ ವೃತ್ತದಲ್ಲಿ ವೇದಿಕೆ ನಿರ್ಮಾಣ ಮಾಡಿ, ರೂಪಕ ವಾಹನಗಳಿಗೆ ಸ್ವಾಗತ ಕೋರುತ್ತೇವೆ. ಹೀಗಾಗಿ ನಮಗೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿಕೊಂಡರು.
ನಂತರ ಡಿಸಿಪಿ ಗಡಾದಿ ಮಾತನಾಡಿದ ಕೊರೊನಾ ಲಾಕ್ಡೌನ್ ಮುಗಿದ ಬಳಿಕ ಅನೇಕ ಹಬ್ಬ, ಜಾತ್ರೆ, ಉತ್ಸವಗಳಲ್ಲಿ ಡಾಲ್ಬಿ ಬಳಕೆ ಕಡಿಮೆ
ಯಾಗಿದೆ. ಈ ಸಂದರ್ಭದಲ್ಲಿ ಡಾಲ್ಬಿ ಬಳಕೆ ಮಾಡಿದವರ ವಿರುದ್ಧ ನಾವು ಕ್ರಮ ತೆಗೆದುಕೊಂಡಿದ್ದೇವೆ. ಹೀಗಾಗಿ ಕಾನೂನು ಎಲ್ಲರಿಗೂ ಒಂದೇಯಾಗಿದ್ದು, ರಾಜ್ಯೋತ್ಸವದಲ್ಲಿಯೂ ಡಾಲ್ಬಿ ಬಳಸದೇ ಅದ್ಧೂರಿಯಾಗಿ ಆಚರಿಸೋಣ ಎಂದರು. ಇದೇ ವೇಳೆ ಮಾತನಾಡಿದ ಕನ್ನಡ ಹೋರಾಟಗಾರರು ಗಣೇಶೋತ್ಸವ ವೇಳೆ ಯಾವ ರೀತಿ ಡಾಲ್ಬಿ ಹಚ್ಚಲು ಅವಕಾಶ ಮಾಡಿಕೊಟ್ಟಿದ್ದಿರಿ, ಆ ರೀತಿ ನಮಗೂ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರು.
ಸಭೆಯಲ್ಲಿ ಎಸಿಪಿ ನಾರಾಯಣ ಭರಮನಿ, ಎಸಿಪಿ ಚಂದ್ರಪ್ಪ, ಕನ್ನಡ ಸಂಘಟನೆ ಮುಖಂಡರಾದ ಮಹಾದೇವ ತಳವಾರ, ದೀಪಕ್ ಗುಡಗನಟ್ಟಿ, ಅನಂತ ಬ್ಯಾಕೋಡ, ವಾಜೀದ್ ಹಿರೇಕೂಡಿ, ಸುರೇಶ ಗವನ್ನವರ, ಗಣೇಶ ರೋಕಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.