ಧಾರವಾಡ: ತಲೆತರಾಂತರಗಳ ಶಿಷ್ಟಾಚಾರಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ತಿಲಾಂಜಲಿ ಇತ್ತಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಮೇಯರ್ ಎಂದಾಕ್ಷಣ ನೆನಪಾಗುವುದು, ಗೌನ್. ಬ್ರಿಟಿಷರ ಕಾಲದಿಂದಲೂ ಗೌನ್ ಧರಿಸಿಕೊಂಡು ಮೇಯರ್ ಸಭೆಗೆ ಹಾಜರಾಗುವುದು ಸಂಪ್ರದಾಯ.
ಆದರೆ ಇದೇ ಸಂಪ್ರದಾಯಕ್ಕೆ ತಿಲಾಂಜಲಿ ಇತ್ತು ಇತಿಹಾಸ ಸೃಷ್ಟಿಸಿದ್ದಾರೆ ಬಿಜೆಪಿಯ ಮೇಯರ್ ಈರೇಶ ಅಂಚಟಗೇರಿ.
ಕಳೆದ ವಾರ ರಾಷ್ಟ್ರಪತಿ, ಮುಖ್ಯಮಂತ್ರಿಗಳು ಆಗಮಿಸಿದ್ದ ವೇಳೆ ಕೂಡ ಈ ಸಂಪ್ರದಾಯವನ್ನು ಮುರಿದು ಗೌನ್ ಧರಿಸದೇ ಅವರನ್ನು ಸ್ವಾಗತಿಸಿದ್ದ ಮೇಯರ್ ಈರೇಶ ಅಂಚಟಗೇರಿ ಅವರು, ಇಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಗೌನ್ ಧರಿಸದೇ ಭಾಗವಹಿಸಿ ಎಲ್ಲರ ಹುಬ್ಬೇರಿಸಿದ್ದಾರೆ. ಈ ಬಗ್ಗೆ ಪರ-ವಿರೋಧಗಳ ಚರ್ಚೆ ಶುರುವಾಗಿದೆ. ಹಿರಿಯ ರಾಜಕಾರಣಿಗಳು ಬಂದಾಗ ಅವರ ಸ್ವಾಗತಕ್ಕೆ ಮೇಯರ್ ಗೌನ್ ಧರಿಸಿ ಬರೋದು ಶಿಷ್ಠಾಚಾರ. ಇದೇ ಶಿಷ್ಠಾಚಾರಕ್ಕೆ ಬ್ರೇಕ್ ಹಾಕಿದ ಈರೇಶ ಅವರ ಕುರಿತು ಭಾರಿ ಚರ್ಚೆ ಶುರುವಾಗಿದೆ.
ರಾಜ್ಯದ 10 ಮಹಾನಗರ ಪಾಲಿಕೆಯಗಳಲ್ಲಿ ಬ್ರಿಟಿಷ್ ಕಾಲದ ಈ ಸಂಪ್ರದಾಯ ಜಾರಿಯಲ್ಲಿದ್ದು, ಸಂಪ್ರದಾಯ ಮುರಿದ ರಾಜ್ಯದ ಮೊದಲ ಮೇಯರ್ ಎಂಬ ಹೆಗ್ಗಳಿಕೆ ಈರೇಶ ಅವರದ್ದು.
ಈ ಬಗ್ಗೆ ಅವರು ಹೇಳಿದ್ದೇನೆಂದರೆ, ‘ಮಹಾಪೌರರ ವಿಷಯದಲ್ಲಿ ಹೇಗಿರಬೇಕು ಅಂತ ತಿಳಿದುಕೊಳ್ಳಲು ಗೂಗಲ್ ಸರ್ಚ್ ಮಾಡಿದ್ದೆ. ಈ ಪದ್ಧತಿ ಶುರುವಾಗಿದ್ದು ಬ್ರಿಟಿಷರ ಕಾಲದಿಂದ ಎಂದು ತಿಳಿಯಿತು. ಗೌನ್ ಧರಿಸುವುದು ಕೂಡ ಅವರದ್ದೇ ಸಂಪ್ರದಾಯ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಂಡಿರುವ ನಾವು ಇನ್ನೂ ಬ್ರಿಟಿಷ್ ಸಂಪ್ರದಾಯವನ್ನು ಪಾಲಿಸುತ್ತಿರುವುದು ಎಷ್ಟು ಸರಿ ಎಂದು ಎನಿಸಿ ಅದನ್ನು ತ್ಯಜಿಸಿದೆ’ ಎಂದಿದ್ದಾರೆ.