ಕಾಂಗ್ರೆಸ್ ಪಕ್ಷದ ಆಫರ್ ತಿರಸ್ಕರಿಸಿದ ಬಳಿಕ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಮುಂದಿನ ನಡೆ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿತ್ತು. ತಮ್ಮ ಮುಂದಿನ ರಾಜಕೀಯ ಹೆಜ್ಜೆ ಬಿಹಾರದಿಂದಲೇ ಆರಂಭ ಎಂಬರ್ಥದಲ್ಲಿ ಈ ಹಿಂದೆ ಟ್ವೀಟ್ ಮಾಡಿದ್ದರು. ಸದ್ಯ ಬಿಹಾರ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರಶಾಂತ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ 9 ವರ್ಷಗಳಲ್ಲಿ 6 ಸರ್ಕಾರ, ಇದು ನಮ್ಮ ಬಿಹಾರ, ಇನ್ನಾದರೂ ಸ್ಥಿರ ಸರ್ಕಾರ ಸಿಗುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.
ರಾಜ್ಯದ ಏಕೈಕ ಅತಿದೊಡ್ಡ ಪಕ್ಷದ ಡಿ-ಫಾಕ್ಟೋ ಮುಖ್ಯಸ್ಥರಾಗಿರುವ ಆರ್ಜೆಡಿ ನಾಯಕ ತೇಜಸ್ವಿ ಯಾದವ್ಗೆ ಹೊಸ ಸರ್ಕಾರವು ಪ್ರಮುಖ ರಾಜಕೀಯ ಪಾತ್ರವನ್ನು ಎದುರು ನೋಡುತ್ತಿದ್ದೇನೆ ಎಂದು ಕಿಶೋರ್ ಹೇಳಿದರು.
ಈ ರಾಜಕೀಯ ಅಸ್ಥಿರತೆಯ ಯುಗ ಕಳೆದ 10 ವರ್ಷಗಳಿಂದ ನಡೆಯುತ್ತಿದೆ, ಮತ್ತು ಇದು ಆ ದಿಕ್ಕಿನಲ್ಲಿ ಸಾಗಿದೆ. ನಿತೀಶ್ ಕುಮಾರ್ ಮುಖ್ಯ ನಟ, ವೇಗವರ್ಧಕವಾಗಿ ವರ್ತಿಸಿದ್ದಾರೆ. ಬಿಹಾರದ ಪ್ರಜೆಯಾಗಿ, ಅವರು ಹೊಂದಿರುವ ರಚನೆಯಲ್ಲಿ ಅವರು ದೃಢವಾಗಿ ನಿಲ್ಲುತ್ತಾರೆ ಎಂದು ನೀವು ನಿರೀಕ್ಷಿಸಬಹುದು” ಎಂದು ಕಿಶೋರ್ ಎಎನ್ಐಗೆ ತಿಳಿಸಿದ್ದಾರೆ.
ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಜೊತೆಗಿನ ಇತ್ತೀಚಿನ ಒಪ್ಪಂದವಲ್ಲದೆ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, ಆಂಧ್ರದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೂ ಪ್ರಶಾಂತ್ ಕಿಶೋರ್ ಸಲಹೆಗಾರರಾಗಿದ್ದಾರೆ. ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಬೇಕೆಂದು ಒಂದು ವರ್ಗ ಬಯಸಿದ್ದರೆ, ಮತ್ತೊಂದು ವರ್ಗ ಬೇರೊಂದು ಪಕ್ಷದ ಜೊತೆ ಕೆಲಸ ಮಾಡುತ್ತಿರುವುದು ಇರಿಸುಮುರುಸು ತಂದಿತ್ತು.
ಬಿಹಾರದಲ್ಲಿ ನಿತೀಶ್ ಗದ್ದುಗೆಗೇರಲು ನೆರವು
ಈ ಹಿಂದೆ ಬಿಹಾರದಲ್ಲಿ ನಿತೀಶ್ ಗದ್ದುಗೆಗೇರಲು ಪ್ರಶಾಂತ್ ಕಿಶೋರ್ ನೆರವಾಗಿದ್ದರು. ಅದಕ್ಕೆ ಪ್ರತಿಫಲವಾಗಿ ಕ್ಯಾಬಿನೆಟ್ ದರ್ಜೆ ಸ್ಥಾನಮಾನವನ್ನು ಪ್ರಶಾಂತ್ ಪಡೆದುಕೊಂಡಿದ್ದರು. ಆದರೆ, ನಿತೀಶ್ ಬಣದಿಂದ ಹೊರ ಬಂದರು. ಈಗ ನಿತೀಶ್-ತೇಜಸ್ವಿ ಸರ್ಕಾರದಲ್ಲಿ ತೇಜಸ್ವಿ ಆಡಳಿತದ ಬಗ್ಗೆ ನಿರೀಕ್ಷೆಗಳಿವೆ ಎಂದಿದ್ದಾರೆ. ಹಲವು ರಾಜ್ಯಗಳಲ್ಲಿ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣರಾಗಿದ್ದ ಪ್ರಶಾಂತ್ ಕಿಶೋರ್ ನಂತರ ಹಲವೆಡೆ ಹಿನ್ನೆಡೆ ಕಂಡರು. ಸದ್ಯ ದಕ್ಷಿಣದಲ್ಲಿ ಬಿಜೆಪಿಯೇತರ ಸರ್ಕಾರ ಸ್ಥಾಪನೆಗೆ ಬೇಕಾದ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.
2024ರ ಸಾರ್ವತ್ರಿಕ ಚುನಾವಣೆ
ಬಿಹಾರದ ರಾಜಕೀಯ ವಿದ್ಯಮಾನಗಳು 2024ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎನ್ನಲಾಗುತ್ತಿದೆ. ಆದರೆ, ಬಿಹಾರದಲ್ಲಿ ಜೆಡಿಯು- ಆರ್ ಜೆ ಡಿ ಮೈತ್ರಿ ಅಥವಾ ಮಹಾಘಟಬಂಧನ್ ಪುನಃ ಉದಯವಾಗುತ್ತಿರುವುದು ಬಿಹಾರಕ್ಕೆ ಮಾತ್ರ ಸೀಮಿತವಾಗಲಿದೆ. 2024ರ ಸಾರ್ವತ್ರಿಕ ಚುನಾವಣೆಗೆ ಇದರಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಕೇಂದ್ರದಲ್ಲಿ ಬದಲಿ ವಿಪಕ್ಷ ರೂಪುಗಳಿಸಲು ಈ ಮೈತ್ರಿ ರಚನೆಯಾಗಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಬಲ್ಲೆ ಎಂದು ಪ್ರಶಾಂತ್ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿಯೊಂದಿಗಿನ ಮೈತ್ರಿ ಖತಂ
ಮಂಗಳವಾರದಂದು ಬಿಜೆಪಿಯೊಂದಿಗಿನ ಮೈತ್ರಿಯನ್ನು ನಿತೀಶ್ ಕುಮಾರ್ ಕೊನೆಗೊಳಿಸಿದರು ಮತ್ತು ಲಾಲು ಯಾದವ್ ಅವರ ಆರ್ಜೆಡಿಯೊಂದಿಗೆ 2015 ರ ಮೈತ್ರಿಯನ್ನು ಪುನರುಜ್ಜೀವನಗೊಳಿಸಿದರು. ಇದರೊಂದಿಗೆ ಬಿಹಾರದಲ್ಲಿ ಬಿಜೆಪಿ ಮಿತ್ರ ಪಕ್ಷಗಳಿಲ್ಲದೆ, ಮುಂಬರುವ ಚುನಾವಣೆ ಎದುರಿಸಬೇಕಾಗಿದೆ.ಈ ಬದಲಾವಣೆಗಳು ಬಿಹಾರದಲ್ಲಿ ಬಿಜೆಪಿಯ ಅವಕಾಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
ನಿತೀಶ್ ಮೈತ್ರಿ ಕಳೆದುಕೊಳ್ಳಲು ನಿಖರ ಕಾರಣ
2019ರಲ್ಲಿ ಜೆಡಿಯು-ಬಿಜೆಪಿ ಮೈತ್ರಿಕೂಟ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿತ್ತು. ಆದರೆ, ಮರುವರ್ಷದಲ್ಲಿ ತೇಜಸ್ವಿಯಾದವ್ ಆರ್ ಜೆಡಿ ನೇತೃತ್ವ ಅತಿದೊಡ್ಡ ಹೊರ ಹೊಮ್ಮಿತ್ತು. ಬಿಹಾರದಲ್ಲಿ ಎನ್ ಡಿಎ ಭಾಗವಾಗಿದ್ದ ನಿತೀಶ್ ಮೈತ್ರಿ ಕಳೆದುಕೊಳ್ಳಲು ನಿಖರ ಕಾರಣ ಸ್ಪಷ್ಟವಾಗಿಲ್ಲದಿದ್ದರೂ ಜೆಡಿಯು ಸೂಕ್ತ ಸ್ಥಾನಮಾನ ಸಿಗದಿರುವುದು, ಭ್ರಷ್ಟಾಚಾರದ ಆರೋಪ ಹಿನ್ನೆಲೆ ಆರ್ ಸಿ ಪಿ ಸಿಂಗ್ ಜೆಡಿಯು ತೊರೆದಿದ್ದು,ಮೈತ್ರಿಯಲ್ಲಿ ಬಿಜೆಪಿ ಪ್ರಭಾವ ಹೆಚ್ಚಾಗಿದ್ದು ಕಾರಣ ಎನ್ನಬಹುದು.
ನಿತೀಶ್ ಕುಮಾರ್ ನೇತೃತ್ವದ ಜೆಡಿಯು
ಬಿಹಾರದಲ್ಲಿ ವಿಧಾನಸಭೆಯಲ್ಲಿ ಒಟ್ಟು 243 ಸ್ಥಾನಗಳಿವೆ. ಸರ್ಕಾರ ರಚನೆಗೆ ಮ್ಯಾಜಿಕ್ ಸಂಖ್ಯೆ 122 ಆಗಿದೆ. ಪ್ರಸ್ತುತ ಆರ್ ಜೆಡಿ 75 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿದೆ ಮತ್ತು ಬಿಜೆಪಿ 74 ಸ್ಥಾನ ಗೆಲ್ಲುವ ಮೂಲಕ ಎರಡನೇ ಸ್ಥಾನದಲ್ಲಿದೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ವಿಧಾನಸಭೆಯಲ್ಲಿ ಕೇವಲ 43 ಸ್ಥಾನಗಳನ್ನು ಹೊಂದಿದೆ. ಮತ್ತೊಂದೆಡೆ ಕಾಂಗ್ರೆಸ್ ಸಿಪಿಐಎಂಎಲ್, ಸಿಪಿಎಂ ಮತ್ತು ಸಿಪಿಐ ಜೊತೆಗೆ ಆರ್ಜೆಡಿ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಕಾಂಗ್ರೆಸ್ 19, ಸಿಪಿಐಎಂಎಲ್ 11, ಸಿಪಿಎಂ ಮತ್ತು ಸಿಪಿಐ ಕ್ರಮವಾಗಿ 3 ಮತ್ತು 2 ಸ್ಥಾನಗಳನ್ನು ಗೆದ್ದಿವೆ. ವಿಧಾನಸಭೆಯಲ್ಲಿ ಈ ಮೈತ್ರಿಕೂಟದ ಸಂಖ್ಯಾಬಲ 153 ಆಗಲಿದೆ. ಬಿಜೆಪಿ ಕೇವಲ 82 ಸ್ಥಾನಗಳನ್ನು ಹೊಂದಿದ್ದು, ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಗುತ್ತದೆ. ಎಐಎಂಎಂ 5 ಸ್ಥಾನಗಳನ್ನು ಹೊಂದಿದ್ದು, ಬಿಎಸ್ಪಿ 1 ಮತ್ತು ಪಕ್ಷೇತರ ಒಂದು ಸ್ಥಾನಗಳನ್ನು ಹೊಂದಿದೆ.