ವಿಜಯಪುರ: ಪ್ರಧಾನಿ ಮೋದಿ ಹಾಗೂ ಯೋಗಿಗೆ ಕುಟುಂಬ ಇಲ್ಲ. ಹೀಗಾಗಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಆದರೆ ಕುಟುಂಬ ರಾಜಕಾರಣ ಎನ್ನುವುದು ಇದೆ ಎಂದು ಅರಣ್ಯ ಹಾಗೂ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಪ್ರತಿಕ್ರಿಯಿಸಿದರು.
ಮೋದಿ, ಯೋಗಿ ಕುಟುಂಬ ಇಲ್ಲದ ನಾಯಕರು. ನಾವೆಲ್ಲ ಕುಟುಂಬ ರಾಜಕಾರಣದಿಂದ ಬಂದವರು. ನನ್ನ ತಂದೆ ರಾಜಕಾರಣದಲ್ಲಿ ಇದ್ದರು, ಈಗ ನಾನೂ ಇದ್ದೇನೆ. ಯಡಿಯೂರಪ್ಪ ರಾಜಕಾರಣದಲ್ಲಿದ್ದರು, ಈಗ ಅವರ ಪುತ್ರ ವಿಜಯೇಂದ್ರ ಕೂಡ ರಾಜಕಾರಣದಲ್ಲಿದ್ದಾರೆ ಎಂದು ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಬಿ.ಎಸ್. ಯಡಿಯೂರಪ್ಪ ನಿವೃತ್ತಿ ಘೋಷಣೆಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಕತ್ತಿ, ಯಡಿಯೂರಪ್ಪ ವಯಸ್ಸು 80 ಆಗಿದೆ. ಈಗಲೂ ದುಡಿಯುವ ತಾಕತ್ತು, ಹಂಬಲ ಇದೆ. ಆದರೂ ಪಕ್ಷದ ನಿಯಮಾನುಸಾರ ನಿವೃತ್ತಿ ಘೋಷಿಸಿದ್ದು, ಪುತ್ರನಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಲು ತೀರ್ಮಾನಿಸಿದ್ದಾರೆ ಎಂದರು.
ಇನ್ನು ಕಾಂಗ್ರೆಸ್ ನಲ್ಲಿ ಹೆಚ್ಚುತ್ತಿರುವ ಸಿಎಂ ಪೈಪೋಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಕತ್ತಿ, ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಹೀಗಾಗಿ ಯಾರ್ಯಾರು ಚಟ ತೀರಿಸಿಕೊಳ್ಳುತ್ತಾರೋ ತೀರಿಸಿಕೊಳ್ಳಿ ಎಂದರು.ಇನ್ನು ಬಿಜೆಪಿಯಲ್ಲಿ ಯಾರಾದರೂ ಸಿಎಂ ಆಗಬಹುದು, ದಲಿತರೂ ಆಗಬಹುದು, ನನಗೂ ಹಂಬಲ ಇದೆ ಎಂದ ಅವರು, ಆಲಮಟ್ಟಿ ಗೆ ಶೀಘ್ರದಲ್ಲೇ ಕಚೇರಿ ಸ್ಥಳಾಂತರಗೊಳ್ಳಲಿವೆ ಎಂದರು.