ಎಲ್ಲಾ ಕಡೆ ಬೆಂಕಿ ಹಚ್ಚೋದು ಕಲ್ಲು ಒಡೆಯೋದು ನಡೀತಿದೆ ಅದಕ್ಕೋಸ್ಕರ ಮುಂಜಾಗ್ರತೆ ತಗೆದುಕೊಂಡಿರಬಹುದು. ಆದ್ರೆ ಪ್ರತಿಭಟನೆ ಒಂದು ದಿನ ತಡೆಯಬಹುದು, ಎಷ್ಟು ದಿನ ಇರ್ತಾರೆ. ಶಿವಮೊಗ್ಗದಿಂದ (Shivamogga) ಱಪಿಡ್ ಆಯಕ್ಷನ್ ಫೋರ್ಸ್ ತರಿಸಿದ್ದು ಎಷ್ಟು ದಿನ ಜಿಲ್ಲೆಯಲ್ಲಿ ಇರ್ತಾರೆ. ಒಂದಿಲ್ಲ ಒಂದ್ ದಿನ ಸ್ಫೋಟ ಆಗುತ್ತೆ, ಯಾರನ್ಯಾರು ತಡೆಯೋಕಾಗಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (MLA Laxmi Hebbalkar) ಹೇಳಿದರು.
ನನ್ನ ನೀವು ತಡೆಯೋಕಾಗಲ್ಲ, ನಿಮ್ಮನ್ನು ನಾವು ತಡೆಯೋಕಾಗಲ್ಲ. ಅದೇ ರೀತಿ ಪ್ರಜಾಪ್ರಭುತ್ವದಲ್ಲಿ ಯಾವ ಹೋರಾಟ ತಡೆಯಲಾಗಲ್ಲ. ಎರಡು ವರ್ಷ ಕೊರೊನಾ ಸಮಯ ಇತ್ತು . ಪ್ರತಿ ವರ್ಷ 45 ಸಾವಿರ ಹುದ್ದೆ ಭರ್ತಿ ಆಗ್ತಿತ್ತು. 1 ಲಕ್ಷ 35 ಸಾವಿರ ಹುದ್ದೆ ಖಾಲಿ ಇರುವಾಗ ಅವರಿಗೆ ಹೊಳೆದಿದ್ದು ಅಗ್ನಿಪಥ್. ಅಗ್ನಿಪಥ್ ಯೋಜನೆಯಲ್ಲಿ ರಿಟೈರ್ಮೆಂಟ್ ಆದವರನ್ನ ಸೆಕ್ಯೂರಿಟಿ ಗಾರ್ಡ್ ಆಗಿ ಇಟ್ಟುಕೊಳ್ತೀವಿ ಅಂತಾರೆ ಎಂದರು.
ಇವರ ಮೆಂಟಾಲಿಟಿ ಯಾವ ಮಟ್ಟಕ್ಕಿದೆ?
ಬಿಜೆಪಿ ಕಚೇರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಇಟ್ಟುಕೊಳ್ತೀವಿ ಅಂತಾ ಬಿಜೆಪಿ ನಾಯಕರೊಬ್ಬರು ಹೇಳ್ತಾರೆ. ಹಾಗಾದರೆ ಇವರ ಮೆಂಟಾಲಿಟಿ ಯಾವ ಮಟ್ಟಕ್ಕಿದೆ ಎಂದು ಪ್ರಶ್ನೆ ಮಾಡಿದರು.
ಅಮಿತ್ ಶಾ ಮಗ ಜಯ್ ಶಾ ಗೆ ಅಗ್ನಿಪಥ್ ಕೆಲಸಕ್ಕೆ ಹೋಗೋಕೆ ಹೇಳಿ. ಯಾವ ಮಂತ್ರಿ, ಎಂಎಲ್ಎ ಮಕ್ಕಳು ಅಗ್ನಿಪಥ್ ಕೆಲಸಕ್ಕೆ ಹೋಗ್ತಾರೆ, ಬಡವರ ಮಕ್ಕಳು ಹೋಗ್ತಾರೆ. ಮಿಲಿಟರಿಯಲ್ಲಿ ಹುದ್ದೆ ಖಾಲಿ ಇರೋದ್ರಿಂದ ಒಮ್ಮೆ ಸೇರಿಸಬೇಕು.
ಇದೊಂದು ಡ್ರಾಮಾ
16 ಕೋಟಿ ಉದ್ಯೋಗ ಕೊಡಲಾಗದಿದ್ದಕ್ಕೆ ಅಗ್ನಿಪಥ್ ಡ್ರಾಮಾ ರಿಲೀಸ್ ಮಾಡಿದ್ದಾರೆ. ಪ್ರತಿಯೊಂದರಲ್ಲೂ ಆರ್ಎಸ್ಎಸ್ ವಾದ ತರುತ್ತಿದ್ದಾರೆ. ವೈಯಕ್ತಿಕವಾಗಿ ನನಗೆ ವಿರೋಧ ಇಲ್ಲ, ಜಾಬ್ ಸೆಕ್ಯೂರಿಟಿ, ಹೆಲ್ತ್ ಸೆಕ್ಯೂರಿಟಿ, ಪೆನ್ಷನ್ ಇಲ್ಲ. ನಿವೃತ್ತಿ ಆದ ಎಷ್ಟೋ ಮಾಜಿ ಸೈನಿಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಆಕ್ರೋಶ ಹೊರ ಹಾಕಿದರು.
ಬೆಳಗಾವಿಯಲ್ಲಿ ಹೈ ಅಲರ್ಟ್
ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಚಲೋ, ಬೆಳಗಾವಿ ಬಂದ್ಗೆ ಕರೆ ಹಿನ್ನೆಲೆ ಜಿಲ್ಲೆಯಾದ್ಯಂತ ಹೈ ಅಲರ್ಟ್ ಚೆಕ್ ಪೋಸ್ಟ್ ಗಳ ನಿರ್ಮಾಣ ಮಾಡಲಾಗಿದೆ. ಹುಕ್ಕೇರಿ ತಾಲೂಕಿನ ಹತ್ತರಗಿ ನಿಪ್ಪಾಣಿ ತಾಲೂಕಿನ ಕುಗನೊಳ್ಳಿಯಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿತ್ತು.
ಏನಿದು ಅಗ್ನಿಪಥ್ ಯೋಜನೆ?
ಭಾರತದ ಭದ್ರತೆಯನ್ನು ಬಲಪಡಿಸಲು ಕೇಂದ್ರ ಸರ್ಕಾರ ಹೊರ ತಂದಿರುವ ಹೊಸ ಯೋಜನೆಯೇ ಅಗ್ನಿಪಥ್. ಇನ್ನು ಮುಂದೆ ಸೇನೆಯ ಮೂರೂ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ನವ ಯುವಕ-ಯುವತಿಯರಿಗೆ ಅವಕಾಶವನ್ನು ನೀಡುವ ಹಾಗೂ ಮಿಲಿಟರಿಯ ಹೊಸ ನೇಮಕಾತಿ ಮಾದರಿ ‘ಅಗ್ನಿಪಥ್’ ಯೋಜನೆ ಜಾರಿಯಾಗಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ‘ಅಗ್ನಿಪಥ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಅಗ್ನಿ ಪಥ್ಗೆ ಅಗ್ನಿ ವೀರ್ಸ್ಗಳ ನೇಮಕ
“ಅಗ್ನಿಪಥ್ ಯೋಜನೆಯಡಿಯಲ್ಲಿ ಭಾರತೀಯ ಯುವಕರಿಗೆ ಅಗ್ನಿವೀರ್ ಆಗಿ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶವನ್ನು ಒದಗಿಸಲು ಸರ್ಕಾರ ಈ ಯೋಜನೆ ರೂಪಿಸಿದೆ. ‘ಅಗ್ನಿವೀರ್ಸ್’ಗೆ ಉತ್ತಮ ವೇತನ ಪ್ಯಾಕೇಜ್ ಮತ್ತು 4 ವರ್ಷಗಳ ಸೇವೆಯ ನಂತರ ನಿರ್ಗಮನ ನಿವೃತ್ತಿ ಪ್ಯಾಕೇಜ್ ನೀಡಲಾಗುವುದು ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.