ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ. ಏನೇ ಸಮಸ್ಯೆ ಇದ್ದರೂ ತಕ್ಷಣವೇ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ. ನೀವು ಕೊಡುವ ಸಣ್ಣ ಮಾಹಿತಿ ದೊಡ್ಡ ಅನಾಹುತವನ್ನು ತಪ್ಪಿಸಬಹುದು ಎಂದು ಎಸಿಪಿ ಚಂದ್ರಪ್ಪ ಸಾರ್ವಜನಿಕರಿಗೆ ತಿಳಿಸಿದರು.
ಬೆಳಗಾವಿಯ ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕರು ಹಾಗೂ ಶಾಂತಿ ಪಾಲನಾ ಸಮಿತಿಯ ಸಭೆಯನ್ನು ಸಮಾದೇವಿ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಾರ್ವಜನಿಕರ ಕುಂದು ಕೊರತೆಯನ್ನು ಪೊಲೀಸರು ಆಲಿಸಿದರು.
ಈ ವೇಳೆ ಮಾತನಾಡಿದ ಎಸಿಪಿ ಚಂದ್ರಪ್ಪ ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು, ಟ್ರಾಫಿಕ್ ಸಮಸ್ಯೆ ಸೇರಿ ಯಾವುದೇ ಸಮಸ್ಯೆ ಇದ್ದರೂ ನೀವು ತಕ್ಷಣವೇ ಪೊಲೀಸರ ಗಮನಕ್ಕೆ ತರಬೇಕು.
ಸಾಕಷ್ಟು ಜನರು ಘಟನೆ ಆದ ನಂತರ ಪೊಲೀಸರನ್ನು ಸಂಪರ್ಕಿಸಲು ಮುಂದಾಗುತ್ತಾರೆ. ಆದರೆ ನಿಮಗೆ ಏನಾದ್ರೂ ಮುನ್ಸೂಚನೆ ಕಂಡು ಬಂದರೆ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿದ್ರೆ ಮುಂದೆ ಆಗುವ ಅನಾಹುತ ತಪ್ಪಿಸಬಹುದು. ಸುಳ್ಳು ಸುದ್ದಿಗಳನ್ನು ಯಾರೂ ನಂಬಬೇಡಿ. ಯಾವುದೇ ಪ್ರಚೋದನೆಗಳಿಗೆ ಒಳಗಾಗಬೇಡಿ. ಪೊಲೀಸ್ ಇಲಾಖೆ ಹಗಲು ರಾತ್ರಿ ಹದ್ದಿನ ಕಣ್ಣಿಟ್ಟು ಕೆಲಸ ಮಾಡುತ್ತಿದೆ. ಇನ್ನು ನಾವು ಯಾವ ರೀತಿ ಕೆಲಸ ಮಾಡಬೇಕು ಎಂಬ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಸಲಹೆಯನ್ನು ನಾವು ಶೇ.99ರಷ್ಟು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದರು.