ರಾಯಚೂರು: ಎಸ್ಎಸ್ಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದ ಸಿಂಧನೂರಿನ ವಿದ್ಯಾರ್ಥಿನಿ ಬಸವಲೀಲಾ ಆಧಾರ್ ಕಾರ್ಡ್ ಇಲ್ಲದೆ ಮುಂದಿನ ಶಿಕ್ಷಣಕ್ಕೆ ಸಮಸ್ಯೆ ಎದುರಿಸುತ್ತಿದ್ದಾಳೆ.
2016 ರಿಂದಲೂ ಅರ್ಜಿ ಹಾಕಿ ಅಲೆದಾಡಿ ಸುಸ್ತಾಗಿರುವ ಪ್ರತಿಭಾವಂತ ವಿದ್ಯಾರ್ಥಿನಿ ಬಸವಲೀಲಾ ಇದುವರೆಗೆ 11 ಬಾರಿ ಅರ್ಜಿ ಹಾಕಿದ್ದಾಳೆ. ಆದರೂ ಇಲ್ಲಿಯವೆಗೆ ಆಧಾರ್ ಕಾರ್ಡ್ ಸಿಕ್ಕಿಲ್ಲ.
ಬಡತನದ ಕುಟುಂಬದ ವಿದ್ಯಾರ್ಥಿನಿಗೆ ಯಾವುದೇ ಸೌಲಭ್ಯಗಳು ಇಲ್ಲದಿದ್ದರೂ ಸರ್ಕಾರಿ ಶಾಲೆಯಲ್ಲೇ ಓದಿ 625 ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ರ್ಯಾಂಕ್ ತಂದಿದ್ದಾಳೆ. ಕುಟುಂಬದ ಕಷ್ಟದ ಮಧ್ಯೆಯೂ ಆಧಾರ್ ಕಾರ್ಡ್ ಇಲ್ಲದೆ ವಿದ್ಯಾರ್ಥಿನಿ ಇದುವರೆಗೆ ಸ್ಕಾಲರ್ಶಿಪ್ ನಿಂದಲೂ ವಂಚಿತಳಾಗಿದ್ದಾಳೆ.
ಮುಂದಿನ ವಿದ್ಯಾಭ್ಯಾಸಕ್ಕೆ ಆಧಾರ್ ಕಾರ್ಡ್ ಅವಶ್ಯಕತೆ ಇದ್ದು, ಈ ಹಿನ್ನೆಲೆ ವಿದ್ಯಾರ್ಥಿನಿ ಈಗ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ನಾನಾ ಕಾರಣಗಳಿಗೆ ಆಧಾರ್ ಕಾರ್ಡ್ ನೀಡಲು ಸಿಬ್ಬಂದಿ ವಿಳಂಬ ಮಾಡುತ್ತಿದ್ದಾರೆ. ಮಸ್ಕಿ, ಸಿಂಧನೂರಿಗೆ ತೆರಳಿ ಅರ್ಜಿ ಹಾಕಿದರೂ ತಾಂತ್ರಿಕ ಸಮಸ್ಯೆ ಕಾರಣಕ್ಕೆ ಇದುವರೆಗೂ ಆಧಾರ್ ಕಾರ್ಡ್ ಬಂದಿಲ್ಲ. ಆಧಾರ್ ಕಾರ್ಡ್ ಇಲ್ಲದೆ ಪರದಾಡುತ್ತಿರುವ ವಿದ್ಯಾರ್ಥಿನಿ ಬಸವಲೀಲಾ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾಳೆ.